ಕರ್ನಾಟಕದ ಕೈಗಾರಿಕೆಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |
ಅಧ್ಯಾಯ 8. ಕರ್ನಾಟಕದ ಕೈಗಾರಿಕೆಗಳು
I ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.
1. ಕರ್ನಾಟಕದ ಮೊಟ್ಟಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆಗೊಂಡ ಸ್ಥಳ _____
ಉತ್ತರ: ಭದ್ರಾವತಿ
2. ಕರ್ನಾಟಕದ ಮ್ಯಾಂಚೆಸ್ಟರ್ _____
ಉತ್ತರ: ದಾವಣಗೆರೆ
3. ಕಬ್ಬಿನಿಂದ
_____ ನ್ನು ಉತ್ಪಾದಿಸುತ್ತಾರೆ.
ಉತ್ತರ: ಸಕ್ಕರೆ, ಕಾಗದ ಹಾಗೂ ಇಂಧನ
4. ಅಮ್ಮಸಂದ್ರದಲ್ಲಿ _____ ಕೈಗಾರಿಕೆಯಿದೆ.
ಉತ್ತರ: ಸಿಮೆಂಟ್
5. ‘ಸಿಲಿಕಾನ್ ಕಣಿವೆ’ ಎಂದು _____ ನಗರವನ್ನು ಕರೆಯುತ್ತಾರೆ.
ಉತ್ತರ: ಬೆಂಗಳೂರು
II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.
1. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ಕುರಿತು ಬರೆಯಿರಿ.
ಉತ್ತರ: ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ.
‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬ ತತ್ವವನ್ನು ಹೊಂದಿದ್ದ ಅವರು ರಾಜ್ಯದ ಅನೇಕ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿದರು.
1902 ರಂದು ಶಿವನಸಮುದ್ರದಲ್ಲಿ ಜಲ ವಿದ್ಯುಚ್ಛಕ್ತಿ ಉತ್ಪಾದನೆ ಪ್ರಾರಂಭಗೊಂಡ ಮೇಲೆ ವಿವಿಧ ಮೂಲ ಸಾಮಾಗ್ರಿ, ದಿನೋಪಯೋಗಿ ವಸ್ತುಗಳನ್ನು ತಯಾರಿಸುವ ಉದ್ಯಮಗಳು ಅಸ್ತಿತ್ವಕ್ಕೆ ಬಂದವು.
ಅಕ್ಕಿ ಗಿರಣಿ, ಹೆಂಚಿನ ತಯಾರಿಕೆ, ಬೀಡಿ, ಸಿಗರೇಟು, ಕಬ್ಬಿಣ ಮತ್ತು ಹಿತ್ತಾಳೆ ಫೌಂಡ್ರಿಗಳು ಸ್ಥಾಪನೆಯಾದವು.
1923 ರ ನಂತರ ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ, ಸಾಬೂನು ತಯಾರಿಕೆ, ಹತ್ತಿ ಮತ್ತು ರೇಷ್ಮೆ ಗಿರಣಿ, ಕಾಗದ, ಸಿಮೆಂಟ್, ಬಣ್ಣ, ಸಕ್ಕರೆ, ಶ್ರೀಗಂಧದೆಣ್ಣೆ ಮುಂತಾದ ಆಧುನಿಕ ಕೈಗಾರಿಕೆಗಳು ಸ್ಥಾಪನೆಗೊಂಡವು.
ಸ್ವಾತಂತ್ರ್ಯ ಪೂರ್ವದಲ್ಲೇ ಅಂದಿನ ಮೈಸೂರು ಪ್ರಾಂತ್ಯವು ಕೈಗಾರಿಕೆಯಲ್ಲಿ ಮಾದರಿ ರಾಜ್ಯವಾಗಿತ್ತು.
ಇದಕ್ಕೆ ಆರಂಭದಲ್ಲಿ ಬ್ರಿಟಿಷರು ಮತ್ತು ಅಂದಿನ ಆಳರಸರ ಆಸಕ್ತಿಯೂ ಕಾರಣ.
ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರದ ಕೈಗಾರೀಕಾ ನೀತಿ ರಾಜ್ಯದ ಕೈಗಾರಿಕಾ ಪ್ರಗತಿಗೆ ಪೂರಕವಾಯಿತು.
ಇದರ ಫಲವಾಗಿ ಅನೇಕ ಕೈಗಾರಿಕೆಗಳು ಸ್ಥಾಪನೆಗೊಂಡವು.
ಅವುಗಳೆಂದರೆ: ವಿಮಾನ ತಯಾರಿಕೆ, ಎಂಜಿನೀಯರಿಂಗ್, ಮೆಷಿನ್ ಟೂಲ್ಸ್, ಗಡಿಯಾರಗಳು, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ, ಜೈವಿಕ ತಂತ್ರಜ್ಞಾನ ಉದ್ಯಮ ಇತ್ಯಾದಿ.
2. ಕರ್ನಾಟಕದಲ್ಲಿನ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಕುರಿತು ವಿವರಿಸಿ.
ಉತ್ತರ: ಕರ್ನಾಟಕವು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ.
ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು.
ಇದನ್ನು ನಮ್ಮ ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL)
ಎಂದು ಕರೆಯಲಾಯಿತು.
ಅನಂತರ 1989 ರಲ್ಲಿ ಭಾರತದ ಉಕ್ಕು ಪ್ರಾಧಿಕಾರಕ್ಕೆ (SAIL) ವಹಿಸಿಕೊಡಲಾಯಿತು.
ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎಂದು (VISL) ಹೆಸರಿಡಲಾಗಿದೆ.
ಈ ಕಾರ್ಖಾನೆಗೆ ಅಗತ್ಯವಾದ ಕಬ್ಬಿಣದ ಅದಿರು ಕೆಮ್ಮಣ್ಣಗುಂಡಿಯಿಂದ, ಬಂಡಿಗುಡ್ಡದಿಂದ ಸುಣ್ಣ, ಭದ್ರಾ ನದಿಯಿಂದ ನೀರು ಹಾಗೂ ಸಂಡೂರಿನಿಂದ ಮ್ಯಾಂಗನೀಸ್ ಪೂರೈಕೆ ಆಗುತ್ತದೆ.
ಆರಂಭದಲ್ಲಿ ಊದುಕುಲುಮೆಗೆ ಉರುವಲನ್ನು ಉಪಯೋಗಿಸಲಾಗುತ್ತಿತ್ತು.
ಶರಾವತಿ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ ಪ್ರಾರಂಭವಾದ ಮೇಲೆ ಜಲ ವಿದ್ಯುಚ್ಛಕ್ತಿಯನ್ನು ಬಳಸಿಕೊಳ್ಳಲಾಗಿದೆ.
ಈಗ ವಿಶೇಷ ರೀತಿಯ ಉಕ್ಕು, ಬೀಡು ಕಬ್ಬಿಣವನ್ನು ಉತ್ಪಾದಿಸಲಾಗುತ್ತಿದೆ.
ಕರ್ನಾಟಕದ ಮತ್ತೊಂದು ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಖಾಸಗಿ ವಲಯದ ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್.
ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001ರಲ್ಲಿ ಅತ್ಯಾಧುನಿಕ ಕೊರೆಕ್ಸ್
(Corex) ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಸಲಾಗಿದೆ.
ಇದು ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುತ್ತಿದೆ.
3. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ತಿಳಿಸಿ.
ಉತ್ತರ: ಹತ್ತಿಯಿಂದ ಬೀಜ ಬೇರ್ಪಡಿಸುವ (ಜಿನ್ನಿಂಗ್ ಗಿರಣಿ),
ಹತ್ತಿ ದಾರ ತೆಗೆಯುವ (ಸ್ಪಿನ್ನಿಂಗ್ ಗಿರಣಿ) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರಂಭಗೊಂಡವು.
ಮೊಟ್ಟ ಮೊದಲು 1884 ರಲ್ಲಿ ಎಂ.ಎಸ್.ಕೆ. ಗಿರಣಿ ಕಲಬುರಗಿ(ಗುಲ್ಬರ್ಗಾ)ಯಲ್ಲಿ ಸ್ಥಾಪನೆಗೊಂಡಿತು.
ಅನಂತರ ಹುಬ್ಬಳ್ಳಿಯಲ್ಲಿ ಹತ್ತಿ ಬಟ್ಟೆ ಕೈಗಾರಿಕೆಗಳು ಪ್ರಾರಂಭಗೊಂಡವು.
1900ರ ನಂತರ ದೊಡ್ಡ ಹತ್ತಿ ಬಟ್ಟೆ ಗಿರಣಿಗಳು ಸ್ಥಾಪನೆಗೊಂಡವು.
ಅವುಗಳಲ್ಲಿ ಬೆಂಗಳೂರಿನ ಬಿನ್ನಿ ಮಿಲ್, ಮಿನರ್ವ ಮಿಲ್,
ಮೈಸೂರಿನ ಕೆ.ಆರ್.ಮಿಲ್. ದಾವಣೆಗೆರೆಯ ಕಾಟನ್ ಮಿಲ್ ಮುಂತಾದವು ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡಿದ್ದವು.
ಅನಂತರ ಹತ್ತಿ ಬೆಳೆಯುವ ಉತ್ತರದ ಬಯಲು ಪ್ರದೇಶದಲ್ಲಿ ಅಭಿವೃದ್ಧಿಗೊಂಡವು.
ದಾವಣಗೆರೆಯು ರಾಜ್ಯದ ಅತಿ ಮುಖ್ಯ ಹತ್ತಿಬಟ್ಟೆ ಕೈಗಾರಿಕಾ ಕೇಂದ್ರವಾಯಿತು.
ಇದನ್ನು ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದು ಕರೆಯುತ್ತಾರೆ.
ಹುಬ್ಬಳ್ಳಿ, ಇಳಕಲ್, ಗುಳೇದಗುಡ್ಡ, ರಬಕವಿ, ಬಾಗಲಕೋಟೆ, ಮೊಳಕಾಲ್ಮೂರು, ಗದಗ-ಬೆಟಗೇರಿ, ಬಾದಾಮಿ, ಬೆಳಗಾವಿ, ನರಗುಂದ, ಗೋಕಾಕ್, ಬಳ್ಳಾರಿ, ಹುಣಸೂರು, ನಂಜನಗೂಡು, ಪಿರಿಯಾಪಟ್ಟಣ, ಚಾಮರಾಜನಗರಗಳಲ್ಲೂ ಹತ್ತಿ ಬಟ್ಟೆ ನೂಲುವ, ನೇಯುವ ಗಿರಣಿಗಳಿವೆ.
ಪ್ರಸ್ತುತ ರಾಜ್ಯದಲ್ಲಿ 44 ಹತ್ತಿ ಬಟ್ಟೆ ಗಿರಣಿಗಳಿವೆ.
4. ಸಕ್ಕರೆ ಕೈಗಾರಿಕೆಯನ್ನು ಸ್ಥಾಪಿಸಲು ಬೇಕಾಗುವ ಅಂಶಗಳನ್ನು ತಿಳಿಸಿ.
ಉತ್ತರ: ಸಕ್ಕರೆ ಕೈಗಾರಿಕೆ ಸ್ಥಾಪಿಸಲು ಬೇಕಾಗುವ ಅಂಶಗಳು :
ಕಬ್ಬು ಉತ್ಪಾದನೆ,
ಉತ್ತಮ ಹವಾಮಾನ,
ವಿದ್ಯುತ್ ಸರಬರಾಜು,
ಸ್ಥಳೀಯ ಮಾರುಕಟ್ಟೆ,
ಸಾರಿಗೆ ವ್ಯವಸ್ಥೆ ಇತ್ಯಾದಿ.
5. ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು ಕೇಂದ್ರೀಕೃತವಾಗಲು ಕಾರಣ ತಿಳಿಸಿ.
ಉತ್ತರ: ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು ಕೇಂದ್ರೀಕೃತವಾಗಲು ಕಾರಣಗಳು ಈ ರೀತಿಯಾಗಿವೆ.
ಉತ್ತಮ ಹವಾಮಾನ,
ವಿದ್ಯುತ್ ಪೂರೈಕೆ,
ತಾಂತ್ರಿಕ ಪರಿಣಿತಿ,
ಆರ್ಥಿಕ ನೆರವು,
ವಿಶಾಲವಾದ ಮಾರುಕಟ್ಟೆ ಹಾಗೂ
ಮೂಲ ಸೌಕರ್ಯಗಳಿರುವುದರಿಂದ ಬೃಹತ್ ಬೆಂಗಳೂರು ಭಾರತದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ.
III ಹೊಂದಿಸಿ ಬರೆಯಿರಿ.
ಅ ಆ
1) ದಾಂಡೇಲಿ ಎ) ಸಿಮೆಂಟ್
2) ತೋರಣಗಲ್ ಬಿ) ಹತ್ತಿಬಟ್ಟೆ
3) ಮೊಳಕಾಲ್ಮೂರು ಸಿ) ಕಾಗದ
4) ಶಹಾಬಾದ್ ಡಿ) ಕಂಪ್ಯೂಟರ್
5) ಇನ್ಪೋಸಿಸ್ ಇ) ಕಬ್ಬಿಣ ಮತ್ತು ಉಕ್ಕು
ಉತ್ತರ:
ಅ ಆ
1) ದಾಂಡೇಲಿ ಸಿ) ಕಾಗದ
2) ತೋರಣಗಲ್ ಇ) ಕಬ್ಬಿಣ ಮತ್ತು ಉಕ್ಕು
3) ಮೊಳಕಾಲ್ಮೂರು ಬಿ) ಹತ್ತಿಬಟ್ಟೆ
4) ಶಹಾಬಾದ್ ಎ) ಸಿಮೆಂಟ್
5) ಇನ್ಪೋಸಿಸ್ ಡಿ) ಕಂಪ್ಯೂಟರ್
9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Comments
Post a Comment
If any doubt Comment me