ವಿಜಯನಗರ ಮತ್ತು ಬಹಮನಿ ರಾಜ್ಯ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಇತಿಹಾಸ ಪ್ರಶ್ನೊತ್ತರಗಳು |
ಅಧ್ಯಾಯ 4. ವಿಜಯನಗರ ಮತ್ತು ಬಹಮನಿ ರಾಜ್ಯ
I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ_____
ಉತ್ತರ: ಸಾ.ಶ. 1336
2. ಮಧುರಾ ವಿಜಯ ಬರೆದ ಕವಯತ್ರಿ _____
ಉತ್ತರ: ಗಂಗಾದೇವಿ
3. ಪ್ರೌಢದೇವರಾಯನ ಮಂತ್ರಿ ____
ಉತ್ತರ: ಲಕ್ಕಣ ದಂಡೇಶ
4. ಅಮುಕ್ತ ಮಾಲ್ಯದ ಕೃತಿಯನ್ನು ತೆಲುಗಿನಲ್ಲಿ ರಚಿಸಿದ ದೊರೆ _____
ಉತ್ತರ: ಕೃಷ್ಣ ದೇವರಾಯ
5. ಬೀದರಿನಲ್ಲಿ ಮದರಸವನ್ನು ಕಟ್ಟಿಸಿದವನು _____
ಉತ್ತರ: ಮಹಮ್ಮದ್ ಗವಾನ
6. ಕಿತಾಬ್ ಏ ನವರಸ ಗ್ರಂಥವನ್ನು ಬರೆದವನು ____
ಉತ್ತರ: ಎರಡನೇ ಇಬ್ರಾಹಿಂ ಆದಿಲ್ ಷಾ
II ಈ ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ.
1. ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜ ಮನೇತನಗಳನ್ನು ಹೆಸರಿಸಿ.
ಉತ್ತರ: ವಿಜಯನಗರ ಸಾಮ್ರಾಜ್ಯವನ್ನಾಳಿದ 4 ರಾಜಮನೆತನಗಳು:-
*ಸಂಗಮ
*ಸಾಳುವ
*ತುಳುವ ಮತ್ತು
*ಅರವೀಡು
2. ಎರಡನೆಯ ದೇವರಾಯನ ಸಾಧನೆಗಳೇನು?
ಉತ್ತರ: ಎರಡನೇ ದೇವರಾಯನ ಸಾಧನೆಗಳು:-
*ಈತ ʻಗಜ ಬೇಂಟೆಕಾರʼಎಂಬ ಬಿರುದು ಸಹ ಧರಿಸಿದ್ದ
*ಇವನು ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೋಂಡವೀಡನ್ನು ಗೆದ್ದುಕೊಂಡನು.
*ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದ.
*ನಂತರ ಕೇರಳವನ್ನು ಗೆದ್ದು, ಕೇರಳ, ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು.
*ಇದರಿಂದ “ದಕ್ಷೀಣಾಪಥದ ಚಕ್ರವರ್ತಿ”ಎನಿಸಿದ.
* ವಿಜಯಗಳಿಂದ ವಿಜಯನಗರ ಸಾಮ್ರಾಜ್ಯ ಸಿಂಹಳದ ಗಡಿಗಳಿಂದ ಗುಲ್ಬರ್ಗದವರೆಗೆ ಮತ್ತು ತೆಲಂಗಾಣ, ಮಲಬಾರ್ಗಳಿಗೆ ವಿಸ್ತರಿಸಿಕೊಂಡಿತು.
* ನ್ಯೂನಿಜ್ನ ಪ್ರಕಾರ ಪ್ರೌಢದೇವರಾಯನಿಗೆ ಸಿಲೋನ್, ಪುಲಿಕಾಟ್, ಪೆಗು, ತೆನಾಸ್ಸೆರಿ ಮತ್ತು ಮಲಯದ ರಾಜರು ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು.
*ಬಹಮನಿ ಅಹಮದ್ ಷಾನನ್ನು ಬಿಜಾಪುರದವರೆಗೆ ಹಿಮ್ಮೆಟ್ಟಿಸಿ ಮುದಗಲ್ ಮತ್ತು ಬಂಕಾಪುರಗಳನ್ನು ವಶಪಡಿಸಿಕೊಂಡನು.
3. ಕೃಷ್ಣದೇವರಾಯನು ಅಧಿಕಾರಕ್ಕೆ ಬಂದಾಗ ಎದುರಿಸಿದ ಸಮಸ್ಯೆಗಳನ್ನು ತಿಳಿಸಿ.
ಉತ್ತರ: ಕೃಷ್ಣದೇವರಾಯ ಪಟ್ಟಕ್ಕೆ ಬಂದಾಗ ರಾಜ್ಯದ ಒಳ ಹಾಗೂ ಹೊರಗೆ ಜಟಿಲವಾದ ಸಮಸ್ಯೆಗಳಿದ್ದವು.
*ಹೊಸ ಜಲಮಾರ್ಗಗಳ ಮೂಲಕ ಆಗಮಿಸಿದ ಐರೋಪ್ಯರು ಇಲ್ಲಿ ನೆಲೆಗಳನ್ನು ಸ್ಥಾಪಿಸಲು ಆರಂಭಿಸಿದರು.
*ಬಹಮನಿ ರಾಜ್ಯ ಐದು ಷಾಹಿ ರಾಜ್ಯಗಳು ಸುಲ್ತಾನರಾಗಿ ಹೊಸ ರೂಪ ಪಡೆದುಕೊಂಡು ಕೃಷ್ಣದೇವರಾಯನ ವಿರುದ್ಧ ಕದನಕ್ಕಿಳಿದರು.
*ಜೊತೆಗೆ ಉಮ್ಮತ್ತೂರು ಹಾಗೂ ಒರಿಸ್ಸಾದ ಅರಸರು ವಿಜಯನಗರದ ಮೇಲೆ ಹಗೆತನವನ್ನು ಸಾಧಿಸುತ್ತಲೇ ಇದ್ದರು.
4. ಅರ್ಥವ್ಯವಸ್ಥೆ ಮತ್ತು ಸಮಾಜಕ್ಕೆ ವಿಜಯನಗರದ ಕೊಡುಗೆಗಳೇನು?
ಉತ್ತರ: ಅರ್ಥವ್ಯವಸ್ಥೆ:
*ವಿಜಯನಗರವು ಆರ್ಥಿಕವಾಗಿ ಸಮೃದ್ಧವಾಗಿತ್ತು.
*ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು.
*ಕೃಷಿಕರು ಸಾಮಾನ್ಯವಾಗಿ ತಮ್ಮ ಉತ್ಪಾದನೆಯ ನಾಲ್ಕನೆಯ ಒಂದು ಭಾಗವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದರು.
*ವೃತ್ತಿ ತೆರಿಗೆ, ಮನೆ ಕಂದಾಯ, ದಾರಿ ಸುಂಕ, ಸಂತೆ ಸುಂಕ, ವಾಣಿಜ್ಯ ತೆರಿಗೆ, ಆಮದು ಮತ್ತು ರಫ್ತು ತೆರಿಗೆಗಳು, ಸಾಮಂತರಿಂದ ಬರುವ ಕಪ್ಪಕಾಣಿಕೆಗಳು ರಾಜ್ಯದ ಇತರ ಆದಾಯದ ಮೂಲಗಳಾಗಿದ್ದವು.
*ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.
*ಇವರು ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು.
*ಜೋಳ, ರಾಗಿ ಭತ್ತ, ಸಜ್ಜೆ, ಗೋಧಿ, ಅವರೆ, ಹೆಸರು, ಉದ್ದು, ತೊಗರಿ, ಎಳ್ಳು, ಶೇಂಗಾ, ಹತ್ತಿ, ಕಬ್ಬು ತೆಂಗು ಮುಖ್ಯ ಬೆಳೆಗಳಾಗಿದ್ದವು.
*ವಿಜಯನಗರದ ಅರಸರು ಬಾವಿ, ಕೆರೆ-ಕಾಲುವೆಗಳನ್ನು ಕಟ್ಟಿಸುವುದರ ಮೂಲಕ ಕೃಷಿ ನೀರಾವರಿಯನ್ನು ಉತ್ತೇಜಿಸಿದರು.
*ಇವರ ಕಾಲದಲ್ಲಿ ಗೇಣಿ, ಗುತ್ತಿಗೆ, ಸಿದ್ದಾಯ, ವಾರ ಮತ್ತು ಕಡಿ ಎಂಬ ಐದು ಬಗೆಯ ಹಿಡುವಳಿ ಪದ್ಧತಿಗಳಿದ್ದವು.
ಸಾಮಾಜಿಕ ವ್ಯವಸ್ಥೆ:-
*ಸಮಾಜವು ಚಾತುರ್ವರ್ಣ ವ್ಯವಸ್ಥೆಯ ಮೇಲೆ ರೂಪುಗೊಂಡಿತ್ತು.
*ಅನೇಕ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು.
*ಕುಶಲ ಕಲೆಗಾರರು, ಕಮ್ಮಾರರು, ಅಕ್ಕಸಾಲಿಗರು, ಕಂಚುಗಾರರು, ಬಡಗಿಗಳು, ನೇಕಾರರು, ಸಮಗಾರರು (ಚಮ್ಮಾರರು) ಅಧಿಕ ಸಂಖ್ಯೆಯಲ್ಲಿದ್ದರು.
*ಬಾಲ್ಯವಿವಾಹ, ಸಹಗಮನ ಮತ್ತು ದೇವದಾಸಿ ಪದ್ಧತಿಗಳು ರೂಢಿಯಲ್ಲಿದ್ದವು.
*ಏಕಪತ್ನಿತ್ವ ರೂಢಿಯಲ್ಲಿದ್ದರೂ, ದೊರೆಗಳು ಮತ್ತು ಶ್ರೀಮಂತರು ಬಹುಪತ್ನಿಯರನ್ನು ಹೊಂದಿರುತ್ತಿದ್ದರು.
*ವಿಜಯನಗರದಲ್ಲಿ ಸ್ತ್ರೀ ಜಟ್ಟಿಗಳು (ಕುಸ್ತಿಪಟುಗಳು), ಅರಮನೆ ಕಾವಲುಕಾರ್ತಿಯರು ಇದ್ದರು.
*ಹೋಳಿ, ದೀಪಾವಳಿ ಮತ್ತು ದಸರಾ ಹಬ್ಬಗಳನ್ನು ಸಾರ್ವಜನಿಕಾವಾಗಿ ಆಚರಿಸಲಾಗುತ್ತಿತ್ತು.
*ದಸರಾ ಹಬ್ಬವು ಹಂಪಿಯಲ್ಲಿ ರಾಜಾಶ್ರಯದಲ್ಲಿ ವೈಭವದಿಂದ ನಡೆಯುತ್ತಿತ್ತು.
5. ವಿಜಯನಗರ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ಕುರಿತು ಬರೆಯಿರಿ.
ಉತ್ತರ: ಇವರು ಕಾಲದಲ್ಲಿ ದೇವಾಲಯ, ಅರಮನೆ, ಕೋಟೆ, ಗೋಪುರ, ಮಹಾಮಂಟಪ, ಸಾರ್ವಜನಿಕ ಕಟ್ಟಡಗಳು, ಕೆರೆ ಕಟ್ಟೆ, ಕಾಲುವೆ, ಆಣೆಕಟ್ಟೆ ಮುಂತಾದವು ನಿರ್ಮಾಣವಾಗಿವೆ.
*ವಿಜಯನಗರದ ಅರಸರು, ಚಾಲುಕ್ಯ ಚೋಳ ಮತ್ತು ಹೊಯ್ಸಳ ವಾಸ್ತುಶೈಲಿಯ ಮಾದರಿಗಳನ್ನು ಮುಂದುವರೆಸಿದರು.
*ಇವರ ಶೈಲಿಯ ಪ್ರಧಾನ ಲಕ್ಷಣವೆಂದರೆ ಹಲವಾರು ಕಂಬಗಳ ಸಾಲುಗಳಿಂದ ಕೂಡಿದ ವಿಶಾಲ ಸಭಾ ಮಂಟಪ ಅಥವಾ ಕಲ್ಯಾಣ ಮಂಟಪಗಳು.
*ದೇವಾಲಯಗಳು ಎತ್ತರವಾದ ಗೋಪುರಗಳನ್ನು, (ರಾಯ ಗೋಪುರ) ಹೊಂದಿದ್ದು ಪತ್ರಾಕೃತಿಯ ಕಮಾನುಗಳನ್ನು ಮತ್ತು ಮಂಟಪಗಳನ್ನು ಹೊಂದಿವೆ.
*ಇವರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಹಂಪೆ ಶೃಂಗೇರಿ, ತಿರುಪತಿ, ಕಂಚಿ, ಲೇಪಾಕ್ಷಿ, ಕಾರ್ಕಳ, ಮೂಡಬಿದ್ರಿ, ಭಟ್ಕಳ, ಚಿದಂಬರಂ, ಕಾಲಹಸ್ತಿ, ನಂದಿ ಶ್ರೀಶೈಲ, ಕೋಲಾರ ಮುಂತಾದ ಕಡೆಗಳಲ್ಲಿ ಕಾಣಬಹುದು.
*ವಿಜಯನಗರದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ ಹಂಪಿಯ ವಿರೂಪಾಕ್ಷ ದೇವಾಲಯ.
*ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಇದು ಸೊಗಸಾದ ಕೆತ್ತನೆಯ ಕಂಬಗಳು, ಅಲಂಕೃತ ಚಾವಣಿಗಳನ್ನು ಹೊಂದಿದೆ.
*ಹಂಪಿಯಲ್ಲಿರುವ ವಿಜಯ ವಿಠಲ ದೇವಾಲಯವು ಶೃಂಗಾರಮಯ ಕಲಾತ್ಮಕ ಕೆಲಸಕ್ಕೆ ಹೆಸರಾಗಿದೆ.
*ಸಪ್ತಸ್ವರಗಳನ್ನು ಧ್ವನಿಸುವ ಕಂಬಗಳು, ವಿಶಾಲವಾದ ಕಲ್ಯಾಣಮಂಟಪಗಳು, ಕಲ್ಲಿನಲ್ಲಿ ಕೆತ್ತಿದ ರಥ ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ.
*ಕಮಲ್ ಮಹಲ್, ಗಜಶಾಲೆ, ರಾಣಿ ಸ್ನಾನಗೃಹ ಇಂಡೋ-ಮುಸ್ಲಿಂ ಶೈಲಿಯ ಉತ್ತಮ ಕಟ್ಟಡಗಳಾಗಿವೆ.
*ಲಕ್ಷ್ಮೀನರಸಿಂಹ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಉದ್ಯಾನ ವೀರಭದ್ರನ ಶಿಲ್ಪಗಳು ಆಕರ್ಷಕವಾಗಿವೆ.
6. ಮಹಮ್ಮದ್ ಗವಾನನು ಬಹಮನಿ ರಾಜ್ಯದಲ್ಲಿ ಉತ್ತಮ ಪ್ರಧಾನಮಂತ್ರಿ ಹೇಗೆ ಎಂದು ಪರಿಗಣಿಸುವಿರಿ.?
ಉತ್ತರ: ಮಹಮ್ಮದ್ ಗವಾನನು ನಿಷ್ಠೆ, ನಿಸ್ವಾರ್ಥತೆಯಿಂದ ಆಳ್ವಿಕೆ ನಡೆಸಿದನು.
*ಪ್ರಧಾನ ಮಂತ್ರಿಯಾಗಿ ಬಹಮನಿ ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದನು.
*ಬಹಮನಿ ಸುಲ್ತಾನರಾದ ಹುಮಾಯೂನ್, ನಿಜಾಂಷಾ ಹಾಗೂ ಮೂರನೇ ಮಹಮ್ಮದ್ಷಾನ ಆಳ್ವಿಕೆಯ ಕಾಲದಲ್ಲಿ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು.
*ಇವನು ತನ್ನು ದಿಗ್ವಿಜಯಗಳು ಹಾಗೂ ಅಚ್ಚುಕಟ್ಟಾದ ಆಡಳಿತ ಕ್ರಮದಿಂದ ಬಹಮನಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದನು.
*ಗವಾನನು ಕೊಂಕಣ, ಗೋವ ಮತ್ತು ಬೆಳಗಾವಿಯನ್ನು ವಶಪಡಿಸಿಕೊಂಡನು.
*ಓರಿಸ್ಸಾದ ಮೇಲೆ ದಾಳಿ ಮಾಡಿ, ಅಲ್ಲಿಂದ ಕೊಂಡವೀಡು ಪ್ರದೇಶವನ್ನು ವಶಪಡಸಿಕೊಂಡನು.
*ಕಂಚಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.
7. ಬಹಮನಿ ಸುಲ್ತಾನರ ಆಡಳಿತ, ಕಂದಾಯ ವ್ಯವಸ್ಥೆಯನ್ನು ತಿಳಿಸಿ.
ಉತ್ತರ: ಆಡಳಿತ ವ್ಯವಸ್ಥೆ:-
*ಆಡಳಿತದಲ್ಲಿ ಕೇಂದ್ರ, ಪ್ರಾಂತೀಯ ಹಾಗೂ ಗ್ರಾಮ ಆಡಳಿತವೆಂಬ ಮೂರು ಭಾಗಗಳಿದ್ದವು.
*ಇವುಗಳಲ್ಲಿ ಕಂದಾಯ ನ್ಯಾಯ ಮತ್ತು ಸೈನ್ಯ ಆಡಳಿತಗಳಿದ್ದವು.
*ಕೇಂದ್ರ ಸರ್ಕಾರದಲ್ಲಿ ಸುಲ್ತಾನನೇ ಆಡಳಿತದ ಮುಖ್ಯಸ್ಥನಾಗಿರುತ್ತಿದ್ದ.
*ಮಂತ್ರಿಮಂಡಲಕ್ಕೆ ʻಮಜ್ಲಿಸ್-ಇ-ಇಲ್ವಿತ್ ಎಂದರು ಕರೆಯುತ್ತಿದ್ದರು.
*ಉನ್ನತ ಅಧಿಕಾರಿಗಳು, ದಂಡನಾಯಕರು, ಉಲ್ಲೇಮರು, ಅಮೀರರು ಸುಲ್ತಾನನ ಆಪ್ತರು ಮತ್ತು ಸಂಬಂಧಿಗಳು ಆಗಿದ್ದರು.
*ಗವಾನನು ರಾಜ್ಯದಲ್ಲಿ ಹಿಂದೆ ಇದ್ದ ನಾಲ್ಕು ತರಫ್ (ಪ್ರಾಂತ)ಗಳನ್ನು ಎಂಟು ಘಟಕಗಳಾಗಿ ವಿಂಗಡಿಸಿದನು.
*ಹಾಗೆಯೆ ಪ್ರಾಂತಗಳನ್ನು 15 ಸರ್ಕಾರಗಳಾಗಿ ವಿಂಗಡಿಸಲಾಗಿತ್ತು.
*ಸುಭೇದಾರ ಎಂಬ ಅಧಿಕಾರಿಯು ಸರ್ಕಾರದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದನು.
*ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಲಾಗಿತ್ತು.
ಕೊತ್ವಾಲ್, ದೇಶಮುಖ ಮತ್ತು ದೇಸಾಯಿ ಎಂಬ ಅಧಿಕಾರಿಗಳು ಪರಗಣದ ಅಧಿಕಾರಿಗಳಾಗಿದ್ದರು.
*ಆಡಳಿತದ ಕೊನೆಯ ಘಟಕವಾದ ಗ್ರಾಮಗಳಲ್ಲಿ ಪಟೇಲ, ಕುಲಕರ್ಣಿ ಮತ್ತು ಕಾವಲುಗಾರ ಎಂಬ ಅಧಿಕಾರಿಗಳಿದ್ದರು.
*ಗ್ರಾಮಾಡಳಿತ ಘಟಕಗಳು ಸ್ವಾಯತ್ತ ಸಂಸ್ಥೆಯಾಗಿದ್ದವು.
ಕಂದಾಯ ವ್ಯವಸ್ಥೆ:-
*ಅಮೀರ್-ಏ-ಜುಮ್ಲಾರು ಕಂದಾಯದ ಮುಖ್ಯಸ್ಥರಾಗಿದ್ದರು.
* ಭೂಕಂದಾಯವು ರಾಜ್ಯಾದಾಯದ ಮೂಲವಾಗಿತ್ತು. ಉತ್ಪತ್ತಿಯ 1/3 ರಿಂದ 1/2ನೇ ಭಾಗದಷ್ಟನ್ನು ಭೂಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು.
*ಮನೆ, ಗಣಿ, ಹೊಗೆಸೊಪ್ಪು, ಹುಲ್ಲುಗಾವಲು, ವ್ಯಾಪಾರ, ವೃತ್ತಿ ಸೇರಿದಂತೆ 50 ಬಗೆಯ ತೆರಿಗೆಗಳಿದ್ದವು.
*ತೆರಿಗೆಯಿಂದ ಬಂದ ಹಣವನ್ನು ಅರಮನೆ, ಯುದ್ಧ, ಅಂಗರಕ್ಷಕರು, ಕೋಟೆ ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕೆ ಬಳಸುತ್ತಿದ್ದರು.
8. ಬಹಮನಿ ಸುಲ್ತಾನರ ಕಾಲದ ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪವನ್ನು ವಿವರಿಸಿ.
ಉತ್ತರ: ಶಿಕ್ಷಣ:-
ಇವರ ಶೈಕ್ಷಣಿಕ ನೀತಿಯು ಇಸ್ಲಾಂ ಸಂಸ್ಕೃತಿಯನ್ನು ಬೆಳೆಸುವುದಾಗಿತ್ತು.
*ಮಕ್ತಬ ಎಂಬ ಶಾಲೆಗಳಿದ್ದವು.
*ಇವು ಮಸೀದಿಗಳ ನಿಯಂತ್ರಣದಲ್ಲಿದ್ದವು.
*ಮಕ್ತಬಗಳಲ್ಲಿ ಅಕ್ಷರ ಜ್ಞಾನ, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರಗಳನ್ನು ಬೋಧಿಸುತ್ತಿದ್ದರು.
*ಮದರಾಸಗಳು ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವು.
*ಸ್ವತ: ವಿದ್ವಾಂಸನಾಗಿದ್ದ ಮಹಮ್ಮದ್ ಗವಾನ್ ಬೀದರನಲ್ಲಿ ಇಸ್ಲಾಂ ಮತ ಮತ್ತು ಕಾನೂನಿನ ಶಿಕ್ಷಣವನ್ನು ಪ್ರೋತ್ಸಾಹಿಸಲು ಮದರಸ (ಮಹಾವಿದ್ಯಾಲಯ)ವನ್ನು ಸ್ಥಾಪಿಸಿದನು.
ಕಲೆ ಮತ್ತು ವಸ್ತುಶಿಲ್ಪ:-
*ಸುಲ್ತಾನರು ಇಂಡೋ ಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪ ಬೆಳೆಸಿದರು.
* ಒಂದನೆಯ ಅಲಿ ಆದಿಲ್ ಶಹನು ನಿರ್ಮಾಣ ಮಾಡಿದ ಜಾಮಿಯ ಮಸೀದಿಯು ಈ ಕಾಲದ ಒಂದು ಮುಖ್ಯ ಸ್ಮಾರಕವಾಗಿದೆ.
* ಇಬ್ರಾಹಿಂ ರೋಜಾ, ಗೋಲಗುಂಬಜ್, ಗಗನ್ಮಹಲ್, ಅಸಾರ್ ಮಹಲ್ಗಳು ಇವರ ಪ್ರಮುಖ ಸ್ಮಾರಕಗಳಾಗಿವೆ.
9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Comments
Post a Comment
If any doubt Comment me