ಭಾರತದ ಮಾನವ ಸಂಪನ್ಮೂಲಗಳು | 9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-2 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |
9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-2 ಭಾರತದ ಮಾನವ ಸಂಪನ್ಮೂಲಗಳು
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. ಪ್ರಸ್ತುತ ದೇಶದಲ್ಲಿರುವ ಉತ್ಪಾದನಾ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ದುಡಿಯುವ ಜನರನ್ನು ___ ಎಂದು ಕರೆಯಲಾಗುತ್ತದೆ.
ಉತ್ತರ : ಮಾನವ ಸಂಪನ್ಮೂಲ
2. 2011ರಲ್ಲಿ ಭಾರತದ ಲಿಂಗಾನುಪಾತವು ____
ಉತ್ತರ : 943
3. ಭಾರತದಲ್ಲಿ ಜನಗಣತಿಯು ಪ್ರತಿ ___ ವರ್ಷಗಳಿಗೊಮ್ಮೆ ನಡೆಯುತ್ತದೆ.
ಉತ್ತರ : 10
4. ಒಂದು ದೇಶದ ಜನಸಂಖ್ಯೆಯ ಗುಣಮಟ್ಟವು __ ಮತ್ತು ____ ನ್ನು ಅವಲಂಬಿಸಿದೆ.
ಉತ್ತರ : ಸಾಕ್ಷರತೆ ದರ, ಕೌಶಲ್ಯಗಳ ಗಳಿಕೆ ಮತ್ತು ನಿರೀಕ್ಷಿತ ಜೀವಿತಾವಧಿ
5. ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಕ್ಕಳಲ್ಲಿ ಮರಣ ಹೊಂದುವ ಶಿಶುಗಳ ಸರಾಸರಿ ಸಂಖ್ಯೆಗೆ ___ ಎನ್ನುವರು.
ಉತ್ತರ : ಶಿಶು ಮರಣ ದರ
6. ಭಾರತದಲ್ಲಿ ಜನನ ದರ ಹೆಚ್ಚಾಗಿದ್ದು, ಮರಣದರ ___ ಆಗುತ್ತಿರುವುದರಿಂದ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿದೆ.
ಉತ್ತರ : ಕಡಿಮೆ
II. ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ದುಡಿಯುವ ಜನರು ಎಂದು ಯಾರನ್ನು ಗುರುತಿಸಲಾಗುತ್ತಿದೆ?
ಉತ್ತರ : 18 ವರ್ಷದ ಮೇಲ್ಪಟ್ಟು ಮತ್ತು
60 ವರ್ಷದ ಒಳಗಿನ ವಯಸ್ಕರನ್ನು ದುಡಿಯುವ ಜನರು ಎಂದು ಗುರುತಿಸಲಾಗಿದೆ.
2. ಮಾನವ ಸಂಪನ್ಮೂಲ ಎಂದರೇನು?
ಉತ್ತರ : ವಿದ್ಯಾವಂತ ಹಾಗೂ ಆರೋಗ್ಯವಂತ ದುಡಿಯುವ ಜನರೇ ದೇಶದ ಮಾನವ ಸಂಪನ್ಮೂಲ.
3. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
ಉತ್ತರ : 121.1 ಕೋಟಿ
4. ಜನನ ದರ ಎಂದರೇನು?
ಉತ್ತರ : ಪ್ರತಿ ಸಾವಿರ ಜನಸಂಖ್ಯೆಗೆ ಜನಿಸಿದ ಮಕ್ಕಳ ಪ್ರಮಾಣವನ್ನು ಜನನ ದರ ಎನ್ನುವರು.
5. 2011ರಲ್ಲಿ ಭಾರತದ ಜನನ ದರ 22 ಮತ್ತು ಮರಣದರ 6 ಇದೆ ಹಾಗಾದರೆ ಜನಸಂಖ್ಯೆ ಬೆಳವಣಿಗೆ ದರ ಕಂಡು ಹಿಡಿಯಿರಿ.
ಉತ್ತರ : ಜನಸಂಖ್ಯೆ ಬೆಳವಣಿಗೆ ದರ ಸೂತ್ರ = ಜನನ ದರ - ಮರಣ ದರ.
2011 ರಲ್ಲಿ ಭಾರತ ಜನಸಂಖ್ಯೆ ಬೆಳವಣಿಗೆ ದರ=22-6=16.
6. 2011ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟು?
ಉತ್ತರ : 382
7. ಮುಂದುವರಿದ ರಾಷ್ಟ್ರಗಳಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕಡಿಮೆ ಇದೆ. ಏಕೆ?
ಉತ್ತರ : ದೇಶದಲ್ಲಿರುವ ಎಲ್ಲಾ ಜನರು ವಿದ್ಯಾವಂತರು ಮತ್ತು ತಿಳುವಳಿಕೆ ಉಳ್ಳವರು ಆಗಿರುತ್ತಾರೆ.
ಎಲ್ಲರಿಗೂ ಆರೋಗ್ಯ ಮತ್ತು ಸ್ವಚ್ಛತೆ ಸೌಲಭ್ಯಗಳು ದೊರೆಯುತ್ತವೆ.
ಇದರಿಂದಾಗಿ ಈ ಹಂತದಲ್ಲಿ ಜನನ ದರ ಮತ್ತು ಮರಣ ದರ ಗಳೆರಡು ಅತ್ಯಂತ ಕಡಿಮೆ ಇದ್ದು ಜನಸಂಖ್ಯಾ ಬೆಳವಣಿಗೆ ದರವು ಅತ್ಯಂತ ಕಡಿಮೆಯಾಗುತ್ತದೆ.
III. ಕೆಳಗಿನ ಪ್ರಶ್ನೆಗಳಿಗೆ ಐದರಿಂದ ಆರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
1. ಜನಸಾಂದ್ರತೆ ಎಂದರೇನು? ಒಂದು ದೇಶದ ಜನಸಾಂದ್ರತೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಉತ್ತರ : ಜನಸಾಂದ್ರತೆ ಎಂದರೆ ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆಗೆ ಜನಸಾಂದ್ರತೆ ಎನ್ನುತ್ತಾರೆ.
ಜನಸಾಂದ್ರತೆ ಲೆಕ್ಕ ಹಾಕುವ ವಿಧಾನ : ಒಂದು ದೇಶದಲ್ಲಿರುವ ಒಟ್ಟು ಜನಸಂಖ್ಯೆಯನ್ನು ಅಲ್ಲಿನ ಒಟ್ಟು ವಿಸ್ತೀರ್ಣ ದಿಂದ ಭಾಗಿಸುವ ಮೂಲಕ ಜನಸಾಂದ್ರತೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ.
2. ಉತ್ಪಾದನಾಂಗಗಳಲ್ಲಿ ಮಾನವ ಬಂಡವಾಳ ಅತ್ಯುತ್ತಮವಾದದ್ದು ಎಂದು ಏಕೆ ಪರಿಗಣಿಸಲಾಗುತ್ತದೆ?
ಉತ್ತರ : ಶಿಕ್ಷಣ ಮತ್ತು ತರಬೇತಿ ಪಡೆದ ಆರೋಗ್ಯವಂತ ಜನರ ದುಡಿಯುವ ಸಾಮರ್ಥ್ಯ ಹೆಚ್ಚಾಗಿರುವುದನ್ನು ನಮ್ಮ ಪರಿಸರದಲ್ಲಿ ನಾವು ಗಮನಿಸಬಹುದು, ಇದರಿಂದ ರಾಷ್ಟ್ರದ ಆದಾಯ ಹೆಚ್ಚುತ್ತದೆ.
ವಿದ್ಯಾವಂತ ಹಾಗೂ ಆರೋಗ್ಯವಂತ ದುಡಿಯುವ ಜನರೇ ದೇಶದ ಮಾನವ ಸಂಪತ್ತು.
ಸರಕು-ಸೇವೆಗಳ ಉತ್ಪಾದನೆಯಲ್ಲಿ ನಿಸರ್ಗ ಸಂಪತ್ತು ಮತ್ತು ಭೌತಿಕ ಬಂಡವಾಳಕ್ಕಿಂತ ಮಾನವ ಸಂಪತ್ತು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಮಾನವ ಸಂಪತ್ತು ಉತ್ಪಾದನೆಗೆ ಬೇಕಾದ ಜ್ಞಾನ ಮತ್ತು ಶ್ರಮ ಶಕ್ತಿಯನ್ನು ಒದಗಿಸುತ್ತದೆ.
ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿರುವ ಜನರನ್ನು ಶ್ರಮಶಕ್ತಿ ಎನ್ನುತ್ತೇವೆ.
ಮಾನವ ಸಂಪತ್ತು ದುಡಿಮೆಗೆ ಅಗತ್ಯವಾದ ಶ್ರಮಶಕ್ತಿಯನ್ನು ಪೂರೈಸುತ್ತದೆ.
ಮಾನವ ಬಂಡವಾಳವು ಹೆಚ್ಚಿನ ಸಂಶೋಧನೆಗಳನ್ನು ಕೈಗೊಂಡು, ಜನಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಡುತ್ತದೆ.
ನಾವು ಪಡೆಯುವ ವಿದ್ಯುತ್,.... ಟಿವಿ, ಕಂಪ್ಯೂಟರ್, ಮೊಬೈಲ್, ವಾಹನಗಳು ಮುಂತಾದವು ಮಾನವ ಬಂಡವಾಳದ ಕೊಡುಗೆಯಾಗಿದೆ.
ಆದ್ದರಿಂದ ಮಾನವ ಬಂಡವಾಳ ಅತ್ಯುತ್ತಮವಾದದ್ದು ಎಂದು ಪರಿಗಣಿಸಲಾಗುತ್ತದೆ.
3. ಮಾನವ ಬಂಡವಾಳವನ್ನು ರೂಪಿಸುವಲ್ಲಿ ಆರೋಗ್ಯ ಮತ್ತು ಶಿಕ್ಷಣಗಳ ಪಾತ್ರವೇನು?
ಉತ್ತರ : ಮಾನವ ಸಂಪನ್ಮೂಲಕ್ಕೆ ಉತ್ತಮ ಶಿಕ್ಷಣ, ತರಬೇತಿ ಮತ್ತು ಆರೋಗ್ಯ ಸುರಕ್ಷತೆ ಗಳನ್ನು ಒದಗಿಸಿದರೆ, ಅವರು ಮಾನವ ಬಂಡವಾಳವಾಗಿ ಮಾರ್ಪಡುತ್ತಾರೆ.
ಇವರು ರಾಷ್ಟ್ರದ ಆದಾಯದ ಹೆಚ್ಚಳಕ್ಕೆ ಕಾರಣವಾಗುವ, ಸಾಮಾಜಿಕ ಪರಿವರ್ತನೆ ತರುವ ಸಾಮರ್ಥ್ಯ ಹೊಂದಿದ್ದಾರೆ.
ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಹೆಚ್ಚಿನ ಹಣ ಹೂಡುವುದರಿಂದ ಭವಿಷ್ಯದಲ್ಲಿ ಅವರು ಹೆಚ್ಚಿನ ಆದಾಯ ತರಬಲ್ಲರು.
ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.
ಆದ್ದರಿಂದಲೇ ಸರ್ಕಾರಗಳು ನಾಗರಿಕರಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಒದಗಿಸಲು ಶ್ರಮಿಸುತ್ತವೆ.
4. ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾತ್ರ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿರುತ್ತದೆ. ಕಾರಣವೇನು?
ಉತ್ತರ : ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾತ್ರ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿರುವುದಕ್ಕೆ ಕಾರಣಗಳು :
ಹಿಂದುಳಿದ ದೇಶವು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ತೀವ್ರ ಪ್ರಯತ್ನಗಳನ್ನು ಕೈಗೊಳ್ಳುತ್ತದೆ.
ಸರ್ಕಾರವು ಮೊದಲು ಜನರಿಗೆ ಶಿಕ್ಷಣ ನೀಡಲು, ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುಂದಾಗುತ್ತದೆ.
ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲಾಗುತ್ತದೆ.
ಇದರಿಂದ ಮರಣದರ ಶೀಘ್ರವಾಗಿ ಕಡಿಮೆಯಾಗುತ್ತದೆ.
ಆದರೆ ಜನನ ದರವು ಹೆಚ್ಚಾಗಿದ್ದು ಅದು ನಿಧಾನವಾಗಿ ಕಡಿಮೆ ಆಗುತ್ತಿರುತ್ತದೆ.
ಹೀಗೆ ಈ ಹಂತದಲ್ಲಿ ಜನನ ದರ ಹೆಚ್ಚಿದ್ದು ಮರಣದರ ಕಡಿಮೆಯಾಗುವುದರಿಂದ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿರುತ್ತದೆ.
ಸದ್ಯದಲ್ಲಿ ಭಾರತವು ಈ ಹಂತದಲ್ಲಿದೆ.
ಹಾಗಾಗಿ ಇಲ್ಲಿ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿದೆ.
5. ಜನಸಂಖ್ಯೆಯ ಗುಣಮಟ್ಟವನ್ನು ಹೆಚ್ಚಿಸಲು ಯಾವ ಕ್ರಮಗಳನ್ನು ಸೂಚಿಸುವಿರಿ?
ಉತ್ತರ : ಸಂತಾನೋತ್ಪತ್ತಿ ಆರೋಗ್ಯ ಮತ್ತು ಜನಸಂಖ್ಯೆ ಗುಣಮಟ್ಟ ಸಂಬಂಧವನ್ನು ಹೊಂದಿವೆ.
ಉತ್ತಮ ಆರೋಗ್ಯ ಜನರ ಜೀವನ ಗುಣಮಟ್ಟ ಮತ್ತು ಅವರ ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಆದ್ದರಿಂದ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕು ಎಂದರೆ ದೇಶದ ಜನರ ಆರೋಗ್ಯ ಮಟ್ಟವನ್ನು ಸುಧಾರಿಸಬೇಕಾದ ಅವಶ್ಯಕತೆ ಇದೆ.
ಸಂತಾನೋತ್ಪತ್ತಿಯು ಜೀವಿಗಳ ಪ್ರಧಾನ ಲಕ್ಷಣಗಳಲ್ಲಿ ಒಂದು.
ಜನಸಂಖ್ಯೆ ಗುಣಮಟ್ಟವು ಜನಿಸಿದ ಮಕ್ಕಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದ ಮೇಲೆ ಬಹುವಾಗಿ ಅವಲಂಬಿಸಿದೆ.
ಆರೋಗ್ಯಪೂರ್ಣ ಮಕ್ಕಳು ಆರೋಗ್ಯಪೂರ್ಣ ವಯಸ್ಕರಾಗಿ ಬೆಳೆದು ದೇಶದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಬಲ್ಲರು.
ತಾಯಿ ಗರ್ಭಧರಿಸಿದ ಅಂದಿನಿಂದ ಮಗುವಿಗೆ ಜನ್ಮ ನೀಡುವವರಿಗೆ ಆಕೆ ಆರೋಗ್ಯ ಮತ್ತು ಪೌಷ್ಟಿಕತೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಹೆರಿಗೆ ನಂತರ ತಾಯಿ ಮತ್ತು ಶಿಶುವಿಗೆ ಸೂಕ್ತ ಆರೈಕೆಯನ್ನು ಒದಗಿಸಬೇಕಾಗುತ್ತದೆ.
ಮಹಿಳೆಯರು ಆರೋಗ್ಯವಂತರಾಗಿ, ರೋಗರಹಿತ ರಾಗಿ ಇದ್ದರೆ ಮಕ್ಕಳು ಕೂಡ ಆರೋಗ್ಯವಂತರಾಗಿ ಜನಿಸಿ ಬೆಳೆಯುವುದು ನಿರೀಕ್ಷಿತ.
ಆದ್ದರಿಂದ ಆರೋಗ್ಯ ಸೌಲಭ್ಯಗಳಲ್ಲದೆಯೇ
ರೋಗಗಳ ನಿಯಂತ್ರಣಕ್ಕಾಗಿ ಲಸಿಕೀಕರಣ, ಪೌಷ್ಟಿಕಾಂಶಗಳ ನೀಡಿಕೆ ಮತ್ತು ನುರಿತ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಹೆರಿಗೆ ಮಾಡಿಸುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ.
ಈ ಎಲ್ಲಾ ಕ್ರಮಗಳು ಜನಸಂಖ್ಯೆ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಾಗಿವೆ.
9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Comments
Post a Comment
If any doubt Comment me