ಗದ್ಯಪಾಠ- 7- ಶ್ರೇಷ್ಠ ಭಾರತೀಯ ಚಿಂತನೆಗಳು | 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ | 10ನೇ ತರಗತಿ ಪ್ರಶ್ನೋತ್ತರಗಳು | ಶತಾವಧಾನಿ ಡಾ.ಆರ್.ಗಣೇಶ್

ಗದ್ಯಪಾಠ-7-ಶ್ರೇಷ್ಠ ಭಾರತೀಯ ಚಿಂತನೆಗಳು | SSLC First Language Kannada Lesson 7 |


-ಶತಾವಧಾನಿ ಡಾ.ಆರ್.ಗಣೇಶ್
ಕೃತಿಕಾರರ ಪರಿಚಯ: 
ಶತಾವಧಾನಿ ಡಾ.ಆರ್.ಗಣೇಶ್ರವರು ಕೋಲಾರದವರು. ಇವರು ಕರ್ನಾಟಕದಲ್ಲಿ ಕಣ್ಮರೆಯಾಗಿದ್ದ “ಅವಧಾನʼ ಕಲೆಯನ್ನು ಪುನರುಜ್ಜೀವನ ಮಾಡಿದ್ದಾರೆ. ಇದುವರೆಗೆ 1200ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು, ಐದು ಶತಾವಧಾನಗಳನ್ನು ನಡೆಸಿದ್ದಾರೆ. ಕನ್ನಡ, ತೆಲಗು, ಸಂಸ್ಕೃತ, ಪ್ರಾಕೃತ, ಪಾಲಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪರಿಣತಿ ಗಳಿಸಿರುವ ಇವರು ಗ್ರೀಕ್ ಮೊದಲಾದ ಪಾಶ್ಚಾತ್ಯ ಭಾಷೆಗಳ ಪರಿಚಯವನ್ನೂ ಹೊಂದಿದ್ದಾರೆ. ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಆರ್ಷಕಾವ್ಯಗಳ ನುಡಿಬೆಡಗು, ಷಡ್ದರ್ಶನ ಸಂಗ್ರಹ, ಭಾರತೀಲೋಚನ, ಬ್ರಹ್ಮಪುರಿಯ ಭಿಕ್ಷುಕ, ನಿತ್ಯನೀತಿ, ಭಾರತೀಯ ಕ್ಷಾತ್ರಪರಂಪರೆ, ಕಲಾಕೌತುಕ ಮುಂತಾದವು ಇವರ ಕನ್ನಡ ಕೃತಿಗಳು. “ಮಣ್ಣಿನ ಕನಸು ಇವರು ಬರೆದಿರುವ ವಿಶಿಷ್ಟ ಕಾದಂಬರಿ.” “ಕನ್ನಡದಲ್ಲಿ ಅವಧಾನ ಕಲೆ” ಎಂಬ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ತನ್ನ ಪ್ರಪ್ರಥಮ ಡಿ.ಲಿಟ್.ಪದವಿಯನ್ನು ನೀಡಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪತಿಗಳು ನೀಡುವ ಬಾದರಾಯಣ ವ್ಯಾಸ ಸಮ್ಮಾನವೇ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.

I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಧರ್ಮ ಎಂದು ನಮ್ಮ ಪರಂಪರೆ ಯಾವುದನ್ನು ಒಕ್ಕಣಿಸಿದೆ?
ಉ: ಒಮ್ಮೆ ನಾವು ನಮ್ಮ ಸುತ್ತಲಿನ ಜಗದ್ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾರದೇ ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸಲು ಮಾಡುವ ಪ್ರಯತ್ನವನ್ನೇ ಧರ್ಮ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ.

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು?
ಉ: ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ಯಜ್ಞ.

3. ಬಾಳು ಹಸನಾಗಬೇಕಾದರೆ ಯಾವುದನ್ನು ಮೀರಬೇಕು?
ಉ: ಹೊತ್ತು ಹೊತ್ತಿನ ತುತ್ತಿಗಾಗಿ, ಅನ್ನ-ಚಿನ್ನಗಳಿಗಾಗಿ, ಹೆಣ್ಣು ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವ ಸಹಜವಾಗಿ ಲೋಭಿ. ಪ್ರಕೃತಿ ಅವನಿಗೆ ಹೇಳಿಕೊಟ್ಟಿದ್ದೇ ಇಂಥ ಜಿಪುಣತನವನ್ನು, ಇದನ್ನು ಕೆಲಮಟ್ಟಿಗಾದರೂ ಮೀರಿದರೆ ಬಾಳು ಹಸನಾಗುವುದು.

4. ಯಜ್ಞ ಎಂಬ ಶಬ್ದಕ್ಕೆ ಏನೇನು ಅರ್ಥ ಸ್ವಾರಸ್ಯಗಳಿವೆ?
ಉ: ಯಜ್ಞಕ್ಕೆ “ದೇವತಾರಾಧನೆ ಎಂಬ ಅರ್ಥವಷ್ಟೇ ಅಲ್ಲದೆ” “ಒಟ್ಟು ಸೇರುವಿಕೆ”, “ಹಂಚಿಕೊಂಡು ಬಾಳುವಿಕೆ”, “ತ್ಯಾಗ ಮಾಡುವಿಕೆ” ಎಂಬೆಲ್ಲ ಅರ್ಥಸ್ವಾರಸ್ಯಗಳಿವೆ.

5. ಅನ್ನದ ವಿಷಯದಲ್ಲಿ ವೇದ ಏನು ಹೇಳಿದೆ?
ಉ: “ಮನುಷ್ಯಾಃ ಅನ್ನಗತಪ್ರಾಣಾಃ” ಎಂದು ಅನ್ನದ ವಿಷಯದಲ್ಲಿ ವೇದ ಹೇಳಿದೆ.

6. ಪುರುಷಾರ್ಥ ಎಂದರೆ ಏನೆಂದು ಲೇಖಕರ ಅಭಿಪ್ರಾಯ?
ಉ: ನಮ್ಮೊಳಗಿನ ಆತ್ಮತತ್ವದ ಪ್ರಾಪ್ತಿಯ ಪರಿಯೇ ಪುರುಷಾರ್ಥ.

7. ಆಚಾರವು ಯಾವುದಕ್ಕೆ ಸಂಬಂಧಿಸಿದೆ?
ಉ: ಆಚಾರವು ಮಾನವರ ಒಳಗಣ ಶಿಸ್ತಿಗೆ ಸಂಬಂಧಿಸಿದೆ.

8. ಯಾವುದು ಸ್ವಧರ್ಮ ಎಂದು ಲೇಖಕರು ಹೇಳಿದ್ದಾರೆ?
ಉ: ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ.

9. ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಯಾವುದು?
ಉ: ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯ, ಸ್ವಧರ್ಮದ ಆಚರಣೆ ಸ್ವಧರ್ಮದ ವಿಷಯದಲ್ಲಿ ಬಹಳ ಮುಖ್ಯವಾದುದು.

10. ಮನಸ್ಸಿನ ನಿಜವಾದ ಉನ್ನತಿಯನ್ನು ತೋರುವ ಅಂಶ ಯಾವುದು?
ಉ: ತ್ಯಾಗವನ್ನು ಮಾಡಿಯೂ ಪಶ್ಚಾತ್ತಾಪವನ್ನು ಪಡದಿರುವುದು ಮನಸ್ಸಿನ ಉನ್ನತಿಯನ್ನು ತೋರುವ ಅಂಶವಾಗಿದೆ.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಋತ ಎಂದರೇನು?
ಉ: ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ ಭಾವ ಜಗತ್ತಿನ ಅಸ್ತಿತ್ವದ ಹಿಂದಿರುವ ಭಾವ ವ್ಯವಸ್ಥೆ ಕಲಾವಿದರಿಗೆ ಅರಿವಾಗುತ್ತದೆ. ಇವೆರಡೂ ಜಗತ್ತುಗಳ ಹಿಂದಿರುವ ತತ್ವ ಜ್ಞಾನಿಗಳಿಗೆ ತಿಳಿಯುತ್ತದೆ. ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ-ತಂತ್ರಜ್ಞಾನಗಳ ಮಾನವ ವ್ಯವಸ್ಥೆಯಷ್ಟೇ ಅಲ್ಲದೆ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು, ಮುಗಿಲುಗಳು, ಮಳೆ-ಗಾಳಿಗಳು, ಗಿಡಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ. ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ.

2. ಋಣಕ್ಕೂ ಧರ್ಮಕ್ಕೂ ಇರುವ ಸಂಬಂಧವೇನು?
ಉ: ನೀರು ಬರಲು ವಿಜ್ಞಾನ-ತಂತ್ರಜ್ಞಾನಗಳ ಮಾನವ ವ್ಯವಸ್ಥೆಯಷ್ಟೇ ಅಲ್ಲದೆ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು, ಮುಗಿಲುಗಳು, ಮಳೆ-ಗಾಳಿಗಳು, ಗಿಡಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ. ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ. ಈ ಅರಿವು ಯಾರನ್ನೇ ಆದರೂ ಇಡಿಯ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡದೆ ಇರದು. ಕೃತಜ್ಞತೆಯ ಈ ಭಾವವೇ ಋಣಪ್ರಜ್ಞೆ. ಒಮ್ಮೆ ನಾವು ನಮ್ಮ ಸುತ್ತಲಿನ ಜಗದ್ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರದೆ ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡುತ್ತಾನೆ. ಇಂಥ ಪ್ರಯತ್ನವೇ ಧರ್ಮ ಎಂದು ನಮ್ಮ ಪರಂಪರೆ ವ್ಯಾಖ್ಯಾನಿಸಿದೆ. ಹೀಗೆ ಋಣಕ್ಕೂ ಧರ್ಮಕ್ಕೂ ಸಂಬಂಧವಿದೆ.

3. ಯಜ್ಞಕ್ಕಿರುವ ಎರಡು ಮುಖಗಳು ಯಾವುವು?
ಉ: ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ತ್ಯಾಗವು ದಾನವಾದರೆ ಹಾಗೆ ಮಾಡಲು ಬೇಕಾದ ಮನಸ್ಸಿನ ಪರಿಪಾಕ ತಪಸ್ಸು. ಹೀಗೆ ಯಜ್ಞ ಎಂಬ ನಾಣ್ಯಕ್ಕೆ ದಾನ ಮತ್ತು ತಪಸ್ಸುಗಳೆಂಬ ಎರಡು ಮುಖಗಳಿವೆ. ಜೀವನದಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ನಾಣ್ಯ ಯಜ್ಞವೇ ಹೊರತೂ ಬೇರೆ ಬೇರೆ ದೇಶ ಕಾಲಗಳಲ್ಲಿ ಬೇರೆ ಬೇರೆ ಪ್ರಭುತ್ವಗಳಲ್ಲಿ ಚಲಾವಣೆಗೆ ಬರುವ ಹಣವಲ್ಲ. ಧರ್ಮಾಚರಣೆಗೆ ಯಜ್ಞ ಒಂದು ಪ್ರಮುಖ ಸಾಧನ.

4. ಮನುಷ್ಯನು ತನ್ನ ಒಳಿತನ್ನು ಹೇಗೆ ಸಾಧಿಸಬಹುದು?
ಉ: ಮಾನವನು ತನ್ನ ಜೀವನದಲ್ಲಿ ಒಳಿತನ್ನು ಇಬ್ಬಗೆಯಾಗಿ ಸಾಧಿಸಬಹುದೆಂದು ವೇದಗಳು ತಿಳಿಸುವಾಗ “ಇಷ್ಟ” ಮತ್ತು “ಪೂರ್ತ” ಎಂಬ ಎರಡು ಬಗೆಯ ವಿಧಾನಗಳನ್ನು ಒಕ್ಕಣಿಸುತ್ತವೆ. ಇಷ್ಟ ಎಂಬುದು ಸಾಮಾನ್ಯವಾದ ಯಜ್ಞವನ್ನು ಸಂಕೇತಿಸುತ್ತದೆ. ಪೂರ್ತ ಎಂಬುದು ಕೆರೆ-ಬಾವಿಗಳ ಕಟ್ಟಿಸುವಿಕೆ, ಮರ-ಗಿಡಗಳ ನೆಡುವಿಕೆ, ದೀನ-ದಲಿತರಿಗೆ ನೆರವು, ಮಂಟಪ-ಧರ್ಮಛತ್ರಗಳ ನಿರ್ಮಾಣ, ಕವಿ-ಕಲಾವಿದರ ಪೋಷಣೆ ಮುಂತಾದ ಸಾಮಾನ್ಯವಾದ ಲೋಕೋಪಕಾರವನ್ನು ಸಂಕೇತಿಸುತ್ತದೆ. ಇದೂ ಕೂಡ ತತ್ತ್ವತಃ ಸಮಾಜ ಎಂಬ ಅಗ್ನಿಯಲ್ಲಿ ಮಾಡಿದ ಜಗದಾರಾಧನೆ ಎಂಬ ಯಜ್ಞವೇ ಇದರ ಮೂಲಕ ಮನುಷ್ಯ ತನ್ನ ಒಳಿತನ್ನು ಸಾಧಿಸಬಹುದು.

5. ಪುರುಷ ಎಂಬ ಶಬ್ದಕ್ಕಿರುವ ಅರ್ಥವೇನು?
ಉ: ನಮ್ಮೊಳಗಿನ ಆತ್ಮತತ್ತ್ವ ಪ್ರಾಪ್ತಿಯ ಪರಿಯೇ ಪುರುಷಾರ್ಥ. ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ. ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ. ಹೀಗೆ ಸತ್ + ಚಿತ್ + ಆನಂದ ಎಂಬ ಇರವು, ಅರಿವು ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ. ಹೀಗಾಗಿಯೇ ಇಲ್ಲಿ ಕಾಣುವ “ಪುರುಷ” ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ. ಇದೇನಿದ್ದರೂ ಲಂಗಾತೀತವಾದ ಆತ್ಮವನ್ನು ಕುರಿತದ್ದು. ಇಂಥ ಆತ್ಮವೇ ಪರಬ್ರಹ್ಮ ವಸ್ತು.

6. ಸ್ವಧರ್ಮವು ಯಾವುದನ್ನು ಅವಲಂಬಿಸಿದೆ?
ಉ: ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯವಶ್ಯಕ. ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ. ಹಿಂದೆ ಸಮಾಜ ಸರಳವಾಗಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಇಂದು ಹುಟ್ಟು ಮತ್ತು ಪರಿಸರಗಳ ಮೂಲಕವೇ ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಸಾಧುವೂ ಅಲ್ಲ. ಆದುದರಿಂದ ತನ್ನೊಳಗಿನ ಒಲವು ನಿಲುವುಗಳಿಂದ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟು. ಇಲ್ಲಿ ಕೂಡ ಹುಟ್ಟು ಪರಿಸರಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಆದರೆ ಎಂದೂ ಎಲ್ಲಿಯೂ ಇವುಗಳಿಗಿಂತ ಮುಖ್ಯವಾದುದು, ನಾವೆಲ್ಲ ನಚ್ಚಬಹುದಾದುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯವೇ.

III. ಕೆಳಗಿನ ಶಬ್ದಗಳ ಸ್ವಾರಸ್ಯವನ್ನು ಐದಾರು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ:
1. ಋಣ:
ಉ: ಭೂಮಿಯು ನಮ್ಮೆಲ್ಲರನ್ನೂ ತನ್ನ ಗುರುತ್ವದಿಂದ ಹಿಡಿದಿಟ್ಟಿದೆ. ಹಾಗೆಯೇ ನಮ್ಮ ಜೀವನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಒಳಗೊಂಡಿದೆ. ಹಾಗಾಗಿ ನಾವು ಭೂಮಿಗೆ ಕೃತಜ್ಞರಾಗಿರಬೇಕೆಂಬ ಭಾವವೇ ಋಣಪ್ರಜ್ಞೆ. ವಿಜ್ಞಾನ ತಂತ್ರಜ್ಞಾನಗಳ ಮಾನವ ವ್ಯವಸ್ಥೆಯಷ್ಟೇ ಅಲ್ಲದೆ ಪ್ರಕೃತಿ ಭಾಗವಾದ ಕಡಲುಗಳು, ಮುಗಿಲುಗಳು, ಮಳೆ-ಗಾಳಿಗಳು, ರವಿಕಿರಣಗಳು, ಗಿಡ-ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ. ಈ ವ್ಯವಸ್ಥೆಗೆ ನಾವು ಕೃತಜ್ಞರಾಗಿರಬೇಕು. ಈ ಕೃತಜ್ಞತೆಯ ಭಾವವೇ ಋಣಪ್ರಜ್ಞೆ.

2. ಋತ: 
ಉ: ಋತ ಎಂಬ ಪದವು ಆಧುನಿಕ ಕಾಲದಲ್ಲಿ ಹೆಚ್ಚು ಬಳಕೆಯಾಗದೆ ಇದ್ದರೂ ಇದು ಭಾರತೀಯ ಸಂಸ್ಕೃತಿಯು ಜಗತ್ತಿಗೆ ಕೊಟ್ಟ ಒಂದು ಮಹೋನ್ನತ ಪರಿಕಲ್ಪನೆ. ಮೇಲಕ್ಕೆಸೆದ ಚೆಂಡು ಮತ್ತೆ ಭೂಮಿಯತ್ತ ಬೀಳುತ್ತದೆ ಎಂಬುದು ಕಣ್ಣಿಗೆ ಕಾಣುವ ಸತ್ಯ. ಹೀಗೆ ಭೂಮಿಯತ್ತ ಬರಲು, ಭೂಮಿಯ ಗುರುತ್ವವು ಚೆಂಡಿನ ಮೇಲೆ ಕಾರ್ಯವೆಸಗುವುದು ಎಂಬುದು ಋತ. ಮನುಷ್ಯ ಕುಲಕ್ಕೆ ಹಾನಿಯಾಗದಂತೆ ಬಾಳುವುದು ನಮ್ಮ ಧರ್ಮ. ಹಾಗೆಯೇ ಭೂಮಿಯ ಧರ್ಮ –ಗುರುತ್ವ. ಸೂರ್ಯನ ಧರ್ಮ ಬೆಳಗುವುದು. ಸತ್ಯವು ಮೇಲ್ನೋಟಕ್ಕೆ ಎಲ್ಲರಿಗೂ ಕಾಣಿಸಬಲ್ಲುದಾದರೂ ಋತವನ್ನು ಕಾಣಲು ಹೆಚ್ಚಿನ ಪರಿಶ್ರಮ, ಸಂಸ್ಕಾರ ಬೇಕಾಗುತ್ತದೆ.

3. ಸತ್ಯ:
ಉ: ಜಗತ್ತಿನ ಅಸ್ತಿತ್ವ ಎಲ್ಲರಿಗೂ ತೋರುತ್ತದೆ. ಈ ಅಸ್ತಿತ್ವದ ಹಿಂದಿನ ವ್ಯವಸ್ಥೆ ಕೆಲವರಿಗೆ ಮಾತ್ರ ಕಾಣುತ್ತದೆ. ಭೌತ ಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ ಭಾವ ಜಗತ್ತಿನ ಅಸ್ತಿತ್ವದ ಹಿಂದಿರುವ ಭಾವ ವ್ಯವಸ್ಥೆ ಕಲಾವಿದರಿಗೆ ಅರಿವಾಗುತ್ತದೆ. ಇವೆರಡೂ ಜಗತ್ತುಗಳ ಹಿಂದಿರುವ ತತ್ತ್ವ ಜ್ಞಾನಿಗಳಿಗೆ ತಿಳಿಯುತ್ತದೆ. ಹೀಗೆ ಸತ್ಯ ಎನಿಸಿದ ಅಸ್ತಿತ್ವದ ಹಿಂದಿರುವ ಋತ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ವೇದ್ಯ. ಋತದ ಅರಿವಾದ ಕೂಡಲೇ ನಾವು ಸತ್ಯಕ್ಕೆಷ್ಟು ಋಣಿಗಳಾಗಿದ್ದೇವೆಂಬ ಅರಿವು ಮೂಡುತ್ತದೆ.

4. ಧರ್ಮ:
ಉ: ನಾವು ನಮ್ಮ ಸುತ್ತಲಿನ ಜಗದ್ವ್ಯವಸ್ಥೆಯಿಂದ ಜೀವಿಸಲು ಬೇಕಾದ ಎಲ್ಲ ಅನುಕೂಲಗಳನ್ನು ಪಡೆಯುತ್ತಿದ್ದೇವೆ ಎಂಬ ಅರಿವು ಋತ. ಈ ಅರಿವು ಯಾರನ್ನೇ ಆದರೂ ಈ ಇಡಿಯ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡದೇ ಇರದು. ನಾವು ನಮ್ಮ ಸುತ್ತಲಿನ ಜಗದ್ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡುವಂತೆ ನಾವೂ ಜಗದ್ವ್ಯವಸ್ಥೆಯ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು. ಇಂಥ ಪ್ರಯತ್ನವನ್ನೇ ಧರ್ಮ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ.

5. ಸ್ವಧರ್ಮ: 
ಉ: ಪುರುಷಾರ್ಥಗಲ ಸಾಧನೆಗೆ ಸ್ವಧರ್ಮಾಚರಣೆ ಅತ್ಯವಶ್ಯಕ. ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ. ಹಿಂದೆ ಸಮಾಜ ಸರಳವಾಗಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ  ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಇಂದು ಹುಟ್ಟು ಮತ್ತು ಪರಿಸರಗಳ ಮೂಲಕವೇ ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಸಾಧುವೂ ಅಲ್ಲ. ಆದುದರಿಂದ ತನ್ನೊಳಗಿನ ಒಲವು ನಿಲುವುಗಳಿಂದ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟು. ಇಲ್ಲಿ ಕೂಡ ಹುಟ್ಟು ಪರಿಸರಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ತನ್ನ ಇಚ್ಛೆ, ಆಸಕ್ತಿ, ಮನೋಧರ್ಮ, ವ್ಯಕ್ತಿತ್ವ, ಭಾವನೆ –ಇವೆಲ್ಲ ತನಗೊಬ್ಬನಿಗೇ ವಿಶಿಷ್ಟವಾದದ್ದು ಎಂಬುದು ಪ್ರತಿಯೊಬ್ಬರಿಗೂ  ತಿಳಿದಿದೆ. ನಮ್ಮ ಅನನ್ಯ ವ್ಯಕ್ತಿತ್ವವೇ ಒಟ್ಟಾಗಿ ನಮ್ಮ ಸ್ವಧರ್ಮವಾಗಿದೆ.

6. ಈಶ್ವರ: 
ಉ: ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪೈಕಿ ಬಯಕೆಯೇ ಮೂಲವಾದ ಕಾಮವು ಜೀವ ಕೇಂದ್ರಿತವಾಗಿದ್ದರೆ ಇಂಥ ಬಯಕೆಯನ್ನು ಆಯಾ ಹೊತ್ತಿಗೆ ಈಡೇರಿಸಬಲ್ಲ ಸಾಧನಗಳನ್ನು ಪ್ರತಿನಿಧಿಸುವ ಅರ್ಥವು ಜಗತ್ಕೇಂದ್ರಿತವಾಗಿದೆ. ಬಯಕೆ –ಈಡೇರಿಕೆಗಳ ಮೊತ್ತವೆನಿಸಿದ ಜೀವ-ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ, ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ. ಧರ್ಮದ ಕೇಂದ್ರವು ಈಶ್ವರನಲ್ಲಿದೆ. ಜನಸಾಮಾನ್ಯರು ದೇವರು ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ಈಶ್ವರ ಎಂದು ಹೆಸರಿಸಿವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ –ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಅಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವುದಿಲ್ಲ. ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮವಾಗಿದ್ದು ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ.

7. ಪುರುಷಾರ್ಥ:
ಉ: ನಮ್ಮೊಳಗಿನ ಆತ್ಮತತ್ತ್ವ ಪ್ರಾಪ್ತಿಯೇ ಪುರುಷಾರ್ಥ. ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ. ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ. ಹೀಗೆ ಸತ್ + ಚಿತ್ + ಆನಂದ ಎಂಬ ಇರವು, ಅರಿವು ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ ಹೀಗಾಗಿಯೇ ಇಲ್ಲಿ ಕಾಣುವ ಪುರುಷ ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ. ಇದೇನಿದ್ದರೂ ಲಿಂಗಾತೀತವಾದ ಆತ್ಮವನ್ನು ಕುರಿತದ್ದು. ಇಂಥ ಆತ್ಮವೇ ಪರಬ್ರಹ್ಮ ವಸ್ತು.

IV. ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. ಚಿನ್ನವಿಲ್ಲದೆ ಬದುಕಬಹುದು, ಅನ್ನವಿಲ್ಲದೆ ಬದುಕಲಾದೀತೆ?
ಉ: ಈ ಮೇಲಿನ ವಾಕ್ಯವನ್ನು ಶತಾವಧಾನಿ ಆರ್ ಗಣೇಶ್ ರವರು ಬರೆದಿರುವ ಶ್ರೇಷ್ಠ ಭಾರತೀಯ ಚಿಂತನೆಗಳು  ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ:  ಯಜ್ಞ ಸಂಸ್ಕೃತಿಯ ಒಂದು ಅನುಷ್ಠಾನ. ಅಗ್ನಿಯಲ್ಲಿ ಯಾವುದಾದರೂ ಆಹಾರ ಪದಾರ್ಥವನ್ನು ಹಾಕಿದರೆ ಅದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದ ಸತ್ಯ. ವಸ್ತುಸ್ಥಿತಿ ಹೀಗಿದ್ದರೂ ಅದನ್ನೇ ಮಾಡುವುದೆಂದರೆ –ತನಗೆ ಮರಳಿ ಬರುವುದೆಂಬ ಯಾವುದೇ ನಿಶ್ಚಯ ಇಲ್ಲದಿದ್ದರೂ ಕೊಡಬೇಕೆಂಬ ಜೀವನ ಪಾಠದ ಕಲಿಕೆ ತಾನೆ! “ಮನುಷ್ಯಾಃ ಅನ್ನಗತಪ್ರಾಣಾಃ” ಎಂದು ವೇದ ಹೇಳಿದೆ. ಚಿನ್ನವಿಲ್ಲದೆ ಬದುಕಬಹುದು; ಆದರೆ ಅನ್ನವಿಲ್ಲದೆ ಬದುಕಲಾದೀತೇ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ನಮಗೆ ಅವಶ್ಯವಾಗಿ ಬೇಕಾದ ಆಹಾರವನ್ನು ನಾವು ಸಾಂಕೇತಿಕವಾಗಿಯಾದರೂ ಅಗ್ನಿಗೆ ಅರ್ಪಿಸುವುದೆಂದರೆ ಅದು ಪ್ರತಿಫಲದ ಅಪೇಕ್ಷೆಯಿಲ್ಲದೆ ತ್ಯಾಗ ಮಾಡುವುದರ ಲಕ್ಷಣ ಎಂದು ಲೇಖಕರು ಹೇಳಿದ್ದಾರೆ.

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ಯಜ್ಞ.
ಉ: ಈ ಮೇಲಿನ ವಾಕ್ಯವನ್ನು ಶತಾವಧಾನಿ ಆರ್ ಗಣೇಶ್ ರವರು ಬರೆದಿರುವ ಶ್ರೇಷ್ಠ ಭಾರತೀಯ ಚಿಂತನೆಗಳು  ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: Struggle for existence ಎಂದು ಚಾರ್ಲ್ಸ್ಡಾರ್ವಿನ್ ಹೇಳಿರುವಂತೆ ಹೊತ್ತು ಹೊತ್ತಿನ ತುತ್ತಿಗಾಗಿ, ಅನ್ನ-ಚಿನ್ನಗಳಿಗಾಗಿ, ಹೆಣ್ಣು-ಹೆಸರುಗಳಿಗಾಗಿ ಸೆಣಸುತ್ತಿರುವ ಮಾನವ ಸಹಜವಾಗಿ ಲೋಭಿ. ಪ್ರಕೃತಿ ಅವನಿಗೆ ಹೇಳಿಕೊಟ್ಟಿದ್ದು ಇಂಥಹ ಜಿಪುಣತನವನ್ನು. ನಿಸರ್ಗ ಲೋಭಿಯಾದ ಅವನಿಗೆ ಔದಾರ್ಯದ ಹಾದಿಯನ್ನೂ ಅದು ಕೊಡುವ ನೆಮ್ಮದಿಯನ್ನೂ ತಿಳಿಸಿಕೊಡುವ ತಾಯಿ ಸಂಸ್ಕೃತಿ. ಯಜ್ಞ ಈ ಸಂಸ್ಕೃತಿಯ ಒಂದು ಅನುಷ್ಠಾನ ಎಂದು ಹೇಳುವಾಗ ಲೇಖಕರು ಮೇಲಿನ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡುವಂತೆ ನಮ್ಮ ಸುತ್ತಲಿನ ವ್ಯವಸ್ಥೆಗೆ ನಾವು ಋಣಿಗಳೆಂದು ತಿಳಿದ ಬಳಿಕ ಅದನ್ನು ತೀರಿಸುವ ಪ್ರಯತ್ನವನ್ನು ನಾವು ಮಾಡಬೇಕು. ಅದೇ ಧರ್ಮ. ಈ ಧರ್ಮದ ಆಚರಣೆಗೆ ಇರುವ ಪ್ರಧಾನ ಮಾರ್ಗ ಯಜ್ಞ ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

3. ಧರ್ಮದ ಕೇಂದ್ರ ಈಶ್ವರನಲ್ಲಿದೆ.
ಉ: ಉ: ಈ ಮೇಲಿನ ವಾಕ್ಯವನ್ನು ಶತಾವಧಾನಿ ಆರ್ ಗಣೇಶ್ ರವರು ಬರೆದಿರುವ ಶ್ರೇಷ್ಠ ಭಾರತೀಯ ಚಿಂತನೆಗಳು  ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪೈಕಿ ಬಯಕೆಯೇ ಮೂಲವಾದ ಕಾಮವು ಜೀವ ಕೇಂದ್ರಿತವಾಗಿದ್ದರೆ ಇಂಥ ಬಯಕೆಯನ್ನು ಆಯಾ ಹೊತ್ತಿಗೆ ಈಡೇರಿಸಬಲ್ಲ ಸಾಧನಗಳನ್ನು ಪ್ರತಿನಿಧಿಸುವ ಅರ್ಥವು ಜಗತ್ಕೇಂದ್ರಿತವಾಗಿದೆ. ಬಯಕೆ-ಈಡೇರಿಕೆಗಳ ಮೊತ್ತವೆನಿಸಿದ ಜೀವ-ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ. ಧರ್ಮದ ಕೇಂದ್ರವು ಈಶ್ವರನಲ್ಲಿದೆ. ಜನಸಾಮಾನ್ಯರು ದೇವರು ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ಈಶ್ವರ ಎಂದು ಹೆಸರಿಸಿವೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಜೀವ ಜಗತ್ತುಗಳ ನಡುವೆ ಸಾಮರಸ್ಯ ಕಲ್ಪಿಸುವ ವ್ಯವಸ್ಥೆಯಾದ ಧರ್ಮದ ಕೇಂದ್ರ ಇರುವುದು ಜನರೆಲ್ಲರೂ ದೇವರೆಂದು ನಂಬುವ, ಶಾಸ್ತ್ರಗಳು ಈಶ್ವರ ಎಂದು ಕರೆದಿರುವ ಪರತತ್ತ್ವದಲ್ಲಿ ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

4. ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯಾವಶ್ಯಕ
ಉ: ಈ ಮೇಲಿನ ವಾಕ್ಯವನ್ನು ಶತಾವಧಾನಿ ಆರ್ ಗಣೇಶ್ ರವರು ಬರೆದಿರುವ ಶ್ರೇಷ್ಠ ಭಾರತೀಯ ಚಿಂತನೆಗಳು  ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತನ್ನ ಸುತ್ತಮುತ್ತಲ ಜಗತ್ತು ಹೆಚ್ಚಿನ ನೆಮ್ಮದಿಯನ್ನು ಗಳಿಸಿಕೊಳ್ಳುವ ಪರಿಯೇ ಸ್ವಧರ್ಮ. ಹಿಂದೆ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು. ಆದರೆ ಇಂದು ಹುಟ್ಟು ಹಾಗೂ ಪರಿಸರಗಳ ಮೂಲಕವೇ ಸ್ವಧರ್ಮವನ್ನು ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ ಎಂದು ಹೇಳುವಾಗ ಲೇಖಕರು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ತನ್ನೊಳಗಿನ ಒಲವು-ನಿಲುವುಗಳಿಂದಲೇ ಸ್ವಧರ್ಮವನ್ನು ವ್ಯಕ್ತಿ ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳ ಸಾಧನೆಗೆ ಸ್ವಧರ್ಮದ ಆಚರಣೆ ಅಗತ್ಯವಾದುದು ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

V. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:
1. ಋತವು ಮನುಷ್ಯನಿಗೆ ಜಗತ್ತಿಗೆ _____________ಆಗಿರುವಂತೆ ಮಾಡುತ್ತದೆ.
ಅ)ಒಡೆಯ ಆ)ಪ್ರಾಮಾಣಿಕ ಇ)ಕೃತಜ್ಞ ಈ)ಅಡಿಯಾಳು
ಉ:ಇ)ಕೃತಜ್ಞ
2.ಯಜ್ಞವು ನಮಗೆ ಕಲಿಸುವ ಜೀವನಪಾಠವೆಂದರೆ ಯಾವುದೇ ____________ಇಲ್ಲದೆ ದಾನ ಮಾಡಬೇಕು.
ಅ)ಸ್ವಾರ್ಥ ಆ)ಆಚರಣೆ ಇ)ಭಕ್ತಿ ಈ)ಸಂಬಂಧ
ಉ: ಅ)ಸ್ವಾರ್ಥ
3.ಊರಿನಲ್ಲಿ ಜನೋಪಯೋಗಕ್ಕಾಗಿ ಕೆರೆಯನ್ನು ಕಟ್ಟುವುದು ___________ಎನಿಸಿಕೊಳ್ಳುತ್ತದೆ.
ಅ)ಯಜ್ಞ ಆ)ದಾನ ಇ)ಪೂರ್ತ ಈ)ಇಷ್ಟ
ಉ: ಇ) ಪೂರ್ತ
4. ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ___________ಕೂಡ ಆಗುತ್ತದೆ.
ಅ)ವಿಚಾರ ಆ)ಆಚಾರ ಇ)ಪುರುಷಾರ್ಥ ಈ)ಮೋಕ್ಷ
ಉ) ಆ)ಆಚಾರ
5. ಮನಃಪೂರ್ವಕವಾಗಿ ಒಮ್ಮೆ ಕೊಟ್ಟ ಬಳಿಕ______________
ಅ)ಕಳವಳಿಸಬಾರದು ಆ)ಮರೆಯಬಾರದು ಇ)ಕೇಳಬಾರದು ಈ)ಹಳಿಯಬಾರದು
ಉ: ಅ)ಕಳವಳಿಸಬಾರದು.

ಭಾಷಾ ಚಟುವಟಿಕೆ:
I. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ನಾಮಪದ ಎಂದರೇನು? ಉದಾಹರಿಸಿರಿ.
ಉ: ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದವೇ ನಾಮಪದ. ಉದಾ: ಭೀಮ ಎನ್ನುವುದು ನಾಮಪ್ರಕೃತಿ, ಅನ್ನು ಎನ್ನುವುದು ವಿಭಕ್ತಿ ಪ್ರತ್ಯಯ. ಭೀಮನನ್ನು ಎನ್ನುವುದು ನಾಮಪದ.
2. ನಾಮವಾಚಕಗಳ ವಿಧಗಳನ್ನು ಪಟ್ಟಿಮಾಡಿರಿ?
ಉ: ನಾಮವಾಚಕಗಳನ್ನು ವಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ, ಸಂಖ್ಯೇಯವಾಚಕ, ಭಾವನಾಮ, ಪರಿಮಾಣವಾಚಕ, ದಿಗ್ವಾಚಕ, ಸರ್ವನಾಮ ಎಂಬ ಗುಂಪುಗಳಾಗಿ ವಿಂಗಡಿಸಬಹುದು.
3. ಕೃದಂತ ಎಂದರೇನು? ಉದಾಹರಣೆಯನ್ನು ಬರೆಯಿರಿ.
ಉ: ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ. ಇವುಗಳಲ್ಲಿ ಮೂರು ವಿಧ.
ಕೃದಂತನಾಮ: ಮಾಡಿದ, ತಿನ್ನುವ
ಕೃದಂತಭಾವನಾಮ: ಮಾಟ, ತಿನ್ನುವಿಕೆ
ಕೃದಂತಾವ್ಯಯ: ಮಾಡಿ, ತಿಂದು.
4. ಕೊಟ್ಟಿರುವ ಪದಗಳನ್ನು ಕೃದಂತನಾಮ, ಕೃದಂತಭಾವನಾಮ, ಕೃದಂತಾವ್ಯಯಗಳಾಗಿ ವಿಂಗಡಿಸಿ ಬರೆಯಿರಿ.
ಉ: ಮಾಟ, ಓಡಿದ, ತಿಂದ, ನೋಡಿ, ಆಟ, ನೋಡಿದ.

II. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆಯಿರಿ?
1. ವರ್ತಮಾನ ಕೃದಂತನಾಮಕ್ಕೆ ಈ ಪದವು ಉದಾಹರಣೆಯಾಗಿದೆ.
ಅ)ಬರೆಯುವ ಆ)ಬರೆದ ಇ)ಬರೆಯದ ಈ)ಬರೆಹ
ಉ: ಅ) ಬರೆಯುವ
2. “ನೋಟ” ಎಂಬುದು ಈ ವ್ಯಾಕರಣಾಂಶವಾಗಿದೆ.
ಅ)ಕೃದಂತನಾಮ ಆ)ಕೃದಂತಭಾವನಾಮ ಇ)ಕೃದಂತಾವ್ಯಯ ಈ)ತದ್ಧಿತಾಂತ
ಉ: ಆ) ಕೃದಂತಭಾವನಾಮ
3. ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.
ಅ)ತೊಡುಗೆ ಆ)ತಿನ್ನುವಿಕೆ ಇ)ನಡೆಯುವ ಈ)ಮಾಡಲಿಕ್ಕೆ
ಉ: ಈ) ಮಾಡಲಿಕ್ಕೆ
4. “ಲೋಕದೊಳ್” ಎಂಬುದು ಈ ವಿಭಕ್ತಿಯಲ್ಲಿದೆ.
ಅ)ಪ್ರಥಮಾ ಆ)ತೃತೀಯ ಇ)ಪಂಚಮೀ ಈ)ಸಪ್ತಮೀ
ಉ: ಈ) ಸಪ್ತಮೀ

III. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ?
1. ನದಿ, ಪರ್ವತ : ರೂಢನಾಮ : : ವ್ಯಾಪಾರಿ, ವಿಜ್ಞಾನಿ : _____(ಅನ್ವರ್ಥನಾಮ)
2. ನಾನು, ನೀನು : ಪುರುಷಾರ್ಥಕ ಸರ್ವನಾಮ : : ಯಾರು? ಏನು? :____(ಪ್ರಶ್ನಾರ್ಥಕ ಸರ್ವನಾಮ
3. ಅಷ್ಟು : ಪರಿಮಾಣವಾಚಕ : : ಹನ್ನೆರಡು : ______(ಸಂಖ್ಯಾವಾಚಕ)
4. ಪೊಳಲ್ : ಪಟ್ಟಣ : : ಕಸವರ : __________(ಬಂಗಾರ)
*****



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon