ಗದ್ಯಪಾಠ-8- ವೃಕ್ಷಸಾಕ್ಷಿ ಅಭ್ಯಾಸ ಪ್ರಶ್ನೋತ್ತರಗಳು | ದುರ್ಗಸಿಂಹ | 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ |

ಗದ್ಯಪಾಠ-8- ವೃಕ್ಷಸಾಕ್ಷಿ | 10th First Language Kannada Question Answers |
-ದುರ್ಗಸಿಂಹ
ಕೃತಿಕಾರರ ಪರಿಚಯ:
ದುರ್ಗಸಿಂಹನ ಕಾಲ ಸುಮಾರು ಕ್ರಿ.ಶ.1031. ಇವನು ಗದಗ ಜಿಲ್ಲೆಯ ರೋಣ ತಾಲ್ಲೋಕಿನ ಕಿಸುಕಾಡುನಾಡಿನ ಸಯ್ಯಡಿಯವನು. ಇವನು ಕರ್ನಾಟಕ ಪಂಚತಂತ್ರಂ ಎಂಬ ಕೃತಿಯನ್ನು ರಚಿಸಿದ್ದಾನೆ.
ಪ್ರಸ್ತುತ ವೃಕ್ಷಸಾಕ್ಷಿ ಗದ್ಯಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ ಕರ್ನಾಟಕ ಪಂಚತಂತ್ರ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಹೊಸಗನ್ನಡ ರೂಪ:
ಮಧುರಾ ನಗರದಲ್ಲಿದ್ದ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳ ಮಕ್ಕಳು ಒಟ್ಟಿಗೆ ವ್ಯಾಪಾರಕ್ಕಾಗಿ ಹೋಗಿ ಬಹಳಷ್ಟು ಸಂಪತ್ತು (ಹೊನ್ನು) ಪಡೆದು ಹಿಂದಿರುಗಿ ಪುನಃ ತಮ್ಮ ಹುಟ್ಟೂರಾದ ಮಧುರಾಪುರದ ಹೊರವಲಯದ ಹೂದೋಟದಲ್ಲಿ ಬೀಡು ಬಿಟ್ಟರು. ಅರ್ಧರಾತ್ರಿಯಾದಾಗ ಧರ್ಮಬುದ್ಧಿಯು ದುರ್ಬುದ್ಧಿಯವನಾದ ದುಷ್ಟಬುದ್ಧಿಯನ್ನು ಕರೆದು ಗಳಿಸಿರುವ ಹೊನ್ನನ್ನು ಪಾಲು ಮಾಡಿಕೊಳ್ಳೋಣ ಎನ್ನಲು ದುಷ್ಟಬುದ್ಧಿಯು ಪಾಪಬುದ್ಧಿಯನ್ನು ಹೊಂದಿದವನಾಗಿ ಹೀಗೆಂದನು. ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರು ಅಲ್ಲ. ಮತ್ತೆ ವ್ಯಾಪಾರಕ್ಕೆ ಹೋಗಬೇಕು. ಆದ ಕಾರಣದಿಂದ ನಿನಗೂ ನನಗೂ ವೆಚ್ಚಕ್ಕೆ ಬೇಕಾಗುವಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಡೋಣ ಎಂದನು. ಧರ್ಮಬುದ್ಧಿಯು ಆ ಪಾಪಕರ್ಮನನ್ನು ತನ್ನ ಗೆಳೆಯನೇ (ತನ್ನಹಾಗೇ) ಎಂದು ಬಗೆದು ಅವನ ಮಾತಿಗೆ ಒಪ್ಪಿಕೊಂಡು ಒಂದು ದೊಡ್ಡ ಆಲದ ಮರದ ಬಳಿಯಲ್ಲಿ ಹೊನ್ನನ್ನು ಹೂಳಿ ಮರುದಿನ ಇಬ್ಬರೂ ನಗರಕ್ಕೆ ಹೋಗಿ ಇಷ್ಟ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು. ದುಷ್ಟಬುದ್ಧಿಯು ಧರ್ಮಬುದ್ಧಿಯನ್ನು ವಂಚಿಸಿ (ಅವನಿಗೆ ಗೊತ್ತಾಗದಂತೆ) ಹೊನ್ನನ್ನು ಹೂತಿಟ್ಟ ಆಲದಮರದ ಬಳಿ ಹೋಗಿ ಅಲ್ಲಿದ್ದ ಹೊನ್ನೆಲ್ಲವನ್ನೂ ತೆಗೆದುಕೊಂಡು ಹೊಂಡವನ್ನು ಮೊದಲಿನಂತೆ ಮುಚ್ಚಿ ಕೆಲವು ದಿನಗಳು ಕಳೆದ ಮೇಲೆ ತಾನೇ ಧರ್ಮಬುದ್ಧಿಯಲ್ಲಿಗೆ ಬಂದು  ತನ್ನ ಬಳಿ ವೆಚ್ಚಕ್ಕೆ ಹೊನ್ನಿಲ್ಲ ಆದ್ದರಿಂದ ಮತ್ತಷ್ಟು ಸ್ವಲ್ಪ ಹೊನ್ನನ್ನು ತೆಗೆದುಕೊಂಡು ಬರೋಣವೆಂದು ಅವನನ್ನೂ ಕರೆದುಕೊಂಡು ಹೋಗಿ ಹೊನ್ನನ್ನು ಹೂತಿಟ್ಟ ಸ್ಥಳವನ್ನು ಅಗೆದಾಗ ಅಲ್ಲಿ ಹೊನ್ನನ್ನು ಕಾಣದೆ ಇನ್ನು ಹೇಳದಿದ್ದರೆ ಸುಳ್ಳು ತನ್ನ ಮೇಲೆ ಬರುವುದೆಂದು ಹೊನ್ನನೆಲ್ಲವನ್ನೂ ನೀನೆ ತೆಗೆದುಕೊಂಡೆಯೆಂದು ಅತಿ ಕುಟಿಲ ಮನಸ್ಸಿನವನಾದ ದುಷ್ಟಬುದ್ಧಿಯು ಧನದ ಮೇಲಿನ ವ್ಯಾಮೋಹ (ಲೋಭ) ತನದಿಂದ ಮತಿಗೆಟ್ಟವನಾಗಿ ಕಳ್ಳನಿಗೆ ಸುಳ್ಳೇ ತನ್ನ ಶಕ್ತಿ (ತಸ್ಕರಸ್ಯಾನೃತಂ ಬಲಂ) ಎಂಬ ವಾಕ್ಯವನ್ನು ನೆನೆಯುತ್ತ ಸುಳ್ಳನ್ನು ಹೇಳಿದನು (ಕಳ್ಳನಿಗೆ ಸುಳ್ಳೇ ಪ್ರಧಾನ) ಹಾಗೆ ದುಷ್ಟಬುದ್ಧಿಯು ಮೊದಲೇ ಹಾ! ಹಾ! ಎಂದು ಕೆಟ್ಟೆನೆಂದು ಬಾಯನ್ನು ಹೊಟ್ಟೆಯನ್ನು ಹೊಡೆದುಕೊಳ್ಳುತ್ತ ಕೂಗುತ್ತ (ಬೊಬ್ಬೆ ಹಾಕುತ್ತ) ಕಳವಳ ಗೊಂಡವನಂತೆ ರಕ್ಷಣೆಯಿಲ್ಲವೆಂದು ನುಡಿಯಲು, ಸ್ನೇಹ ನಾಶವಾಯಿತಲ್ಲಾ ಎಂದು ಜರಿಯುತ್ತ ನೀನೆ ಕದ್ದವನೆಂದು ಆರೋಪಿಸುತ್ತ, ವಿಚಾರ ಮಾಡೋಣವೆಂದು ಧರ್ಮಾಧಿಕರಣರಲ್ಲಿಗೆ ಬಂದು ಇಬ್ಬರೂ ಆ ವಿಚಾರವನ್ನೆಲ್ಲ ಸವಿಸ್ತಾರವಾಗಿ ಹೇಳಲು ಕೊನೆಯಲ್ಲಿ ದುಷ್ಟಬುದ್ಧಿಯು ಹೀಗೆ ಹೇಳಿದನು. ಹೊನ್ನೆಲ್ಲವನ್ನೂ ಈತನೆ ತೆಗೆದುಕೊಂಡನೆಂಬುದಕ್ಕೆ ಸಾಕ್ಷಿಯಿದೆ ಎನ್ನಲು ಸಭಾಸದರು ಸಾಕ್ಷಿಯನ್ನು ಹೇಳು ಎಂದಾಗ ದುಷ್ಟಬುದ್ಧಿಯು ಹೊನ್ನನ್ನು ಇಡುವಾಗ ಇವನು ಮತ್ತು ತಾನಲ್ಲದೆ ಅಲ್ಲಿ ಇನ್ನು ಯಾರೂ ಮನುಷ್ಯರಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ಅಲ್ಲಿದ್ದ ವಟವೃಕ್ಷವೇ ಸಾಕ್ಷಿ ಎಂದನು. ಅದನ್ನು ಕೇಳಿ ಧರ್ಮಾಧಿಕರಣರು ವಿಸ್ಮಯಗೊಂಡರು. ಇವನ ಮಾತು ಹಿಂದೆಂದೂ ಕೇಳದ ವಿಚಾರ. ಈ ಆಶ್ಚರ್ಯವನ್ನು ನೋಡೋಣವೆಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವುದು ಎಂದಾಗ ಅವನು ವೃಕ್ಷಸಾಕ್ಷಿಯೆಂದು ಈ ಮೊದಲು ಹೇಳಿದವರಾಗಲೀ ಕೇಳಿದವರಾಗಲೀ ಇಲ್ಲ ಎಂದಾಗ
ವಚನ || ಮನುಷ್ಯರ ಸುಕೃತ್ಯ ಮತ್ತು ದುಷ್ಕೃತ್ಯಗಳನ್ನು ದೈವಗಳು ತಿಳಿಯುವುವು. ಆದುದರಿಂದ ಈ ಸಾಕ್ಷಿಯು ಉಚಿತವಾದುದು. ಮರವನ್ನು ಮಾತಾಡಿಸುವುದು ಪರಮಗಹನವಾದ ವಿಚಾರ. ಆದ್ದರಿಂದ ಈ ಸಾಕ್ಷಿಯನ್ನು ಅಂಗೀಕರಿಸುವುದು. ಎಂದು ಧರ್ಮಾಧಿಕರಣರು ಹೇಳಲು ಧರ್ಮಬುದ್ಧಿಯು ತುಂಬಾ ಆಲೋಚಿಸಿ ಒಪ್ಪಿಕೊಂಡನು. ಆಗ ಧರ್ಮಾಧಿಕರಣರು ಇಂದು ಹೊತ್ತು ಹೋಯಿತು (ಸಂಜೆಯಾಯಿತು) ನಾಳೆ ಹೋಗಿ ಕೇಳೋಣವೆಂದು ಹೇಳಲು ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು. ಅಷ್ಟರಲ್ಲಿ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಯಾರೂ ಇಲ್ಲದಂತಹ ಸ್ಥಳಕ್ಕೆ ಕರೆತಂದು ನಡೆದ ವೃತ್ತಾಂತವೆಲ್ಲವನ್ನೂ ವಿವರಿಸಿ ಹೇಳಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣವು ಬರುವುದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹೊನ್ನೆಲ್ಲವನ್ನೂ ತೆಗೆದುಕೊಂಡನೆಂದು ನುಡಿಯಿರಿ ಎಂದನು. ಆತನು  ಹೀಗೆಂದನು.
ಪರಧನಹರಣವೂ, ವಿಶ್ವಾಸಘಾತಕವೂ, ಸ್ವಮಿದ್ರೋಹವೂ ಇವೆಲ್ಲವೂ ಹೇಗೆಂದರೂ ಕೆಡುಕನ್ನು ಉಂಟು ಮಾಡುವುವು. ಇವೆಲ್ಲವನ್ನೂ ನೀನು ತಿಳಿದೂ ಕೂಡ ನನ್ನನ್ನು ಸಾಕ್ಷಿ ಮಾಡಿ, ನುಡಿಸಿ ಕೆಡಿಸಲು ಆಲೋಚಿಸಿದೆ. ನಿನ್ನ ಕ್ಷುಲ್ಲಕ (ಕೀಳು) ಆಲೋಚನೆಯು ನಮ್ಮ ಕುಲವನ್ನೇ ನಾಶ ಮಾಡುವ ರೀತಿಯದು. ಎನ್ನಲು ದುಷ್ಟಬುದ್ಧಿಯು ಅದನ್ನು ಕೇಳಿ ನಮ್ಮ ಕಾರ್ಯವನ್ನು ಕೆಡಿಸದೆ ನಾನು ಹೇಳಿದಂತೆ ಮಾಡು ಎಂದು ತನ್ನ ತಂದೆಯನ್ನು ಒಪ್ಪಿಸುವಷ್ಟರಲ್ಲಿಯೇ ಸಂಜೆಯಾಯಿತು. ಆಕಾಶವನ್ನು ಆವರಿಸಿ ದಿಕ್ಕುಗಳನ್ನು ಮುಚ್ಚಿ ದೃಷ್ಟಿಯನ್ನು ತಡೆದು ಹೊಗೆ ತುಂಬಿ, ಮಳೆಗಾಲದ ಮೋಡ, ಕಾಡಿಗೆಯ ರಾಶಿ, ಕೋಗಿಲೆ, ವಿಷ್ಣುವಿನ ಕಾಯ ಕಾಂತಿ, ಶಿವನ ಕುತ್ತಿಗೆಯ ಬಣ್ಣದ ಕತ್ತಲೆ ಕ್ರಮೇಣ ಹಬ್ಬಿತು.
ಆ ರೀತಿಯಾಗಿ ಕವಿದ ಕತ್ತಲೆಯಲ್ಲಿ ಕಲ್ಲದೆ ಬಿಡೆನೆಂದು ಕರೆದುಕೊಂಡು ಹೋಗುವಂತೆ ಕರೆದೊಯ್ದು ಮಾರಿಯ ಮನೆಗೆ ಹರಕೆಯ ಕುರಿಯನ್ನು ಕರೆದೊಯ್ಯುವಂತೆ ಆಲದ ಮರದ ಪೊಟರೆಯಲ್ಲಿ ತನ್ನ ತಂದೆಯನ್ನು ಹೊಗಿಸಿ ವ್ಯಾಜ್ಯವನ್ನು ಗೆದ್ದೆನೆಂದು ಖುಷಿಪಟ್ಟು ಮನೆಗೆ ಬಂದು ನಿದ್ರೆ ಮಾಡಿದನು.
ಬೆಳಗಾಗಲು ಧರ್ಮಬುದ್ಧಿಯು ದೇವ, ಗುರು, ದ್ವಿಜ ಪೂಜೆಗಳನ್ನು ಮಾಡುತ್ತ ಕಳೆಯುತ್ತಿರಲು, ದುಷ್ಟಬುದ್ಧಿಯು ಮುಖವನ್ನು ತೊಳೆಯದೆ ಬಂದು ಧರ್ಮಾಧಿಕರಣರಿಗೆ ಹೀಗೆ ಹೇಳಿದನು.
ಪ್ರತ್ಯರ್ಥಿ ಬಂದಿಲ್ಲ, ಬಹಳ ಹೊತ್ತಾಯಿತು. ನಾನೇಕು ಮಾಡಬೇಕು ಎಂದು ಕೇಳುತ್ತಿರಲು ಅಷ್ಟರಲ್ಲಿ ಧರ್ಮಬುದ್ಧಿಯು ಬರುತ್ತಿರುವುದನ್ನು ಕಂಡು ಆ ಕೂಡಲೇ ನಡೆಯಿರಿ ನಿಮ್ಮಿಬ್ಬರ ಜಗಳವನ್ನು ತೀರ್ಮಾನಿಸುವೆವು ಎಂದು ಆಲದ ಮರದ ಸಮೀಪಕ್ಕೆ ಬಂದು ಅಷ್ಟವಿಧಾರ್ಚನೆಯಿಂದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ಹೀಗೆಂದರು. ನೀನಾದರೋ ಯಕ್ಷಾದಿ ದಿವ್ಯ ದೇವತಾವಾಸವೂ ಆದ ವೃಕ್ಷವಾಗಿರುವೆ. ಆದ್ದರಿಂದ ನಿನ್ನ ಸಾಕ್ಷಿ ಮಾಡಿ ಕೇಳುವೆವು. ನೀನು ನಿಜವನ್ನೇ ನುಡಿಯೆಂದು ಧರ್ಮಾಧಿಕರಣರು ಧರ್ಮದ ವಿಚಾರಗಳನ್ನು ಕುರಿತು ಹೇಳಿದಾಗ ಮರದ ಪೊಟರೆಯಲ್ಲಿ ಅಡಗಿ ಕುಳಿತ್ತಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಮತಿಗೆಟ್ಟು ಧರ್ಮಗತಿಯನ್ನು ಬಿಟ್ಟು “ಪ್ರಕೃತಿ ವಿಕೃತಿಯಾದ ಮನುಷ್ಯನ ಆಯುಷ್ಯ ಕು ಕುಂದುವುದು. ಎಂದು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡಿರುವನು ಎಂದು ಹೇಳಿದನು. ನೆರೆದವರೂ ಧರ್ಮಾಧಿಕರಣರೂ ಇದನ್ನು ಕೇಳಿ ಆಶ್ಚರ್ಯಪಟ್ಟರು. ಧರ್ಮಬುದ್ಧಿಯೂ ಕೂಡ ಆಶ್ಚರ್ಯಚಕಿತನಾಗಿ ಇದು ದೈವವಲ್ಲ. ಆಗಿದ್ದರೆ ಸತ್ಯವನ್ನೇಕೆ ನುಡಿಯದು? ಇದೇನಾದರೊಂದು ಕೃತ್ರಿಮವಾಗಿರಬೇಕು. ಎಂದು ಆ ಮರವನ್ನು ಒಂದು ಸುತ್ತು ಹಾಕಿ ನೋಡಿ ಅಲ್ಲೊಂದು ದೊಡ್ಡ ಪೊಟರೆಯೂ ಹಾಗೂ ಅಲ್ಲಿ ಮನುಷ್ಯ ಸಂಚಾರವಾದ ಕುರುಹು ಇದ್ದುದ್ದನ್ನು ನೋಡಿ ಧರ್ಮಾಧಿಕರಣರಿಗೆ ಹೀಗೆ ಹೇಳಿದನು. ಸುಳ್ಳು ಹೇಳದ (ಹುಸಿಯಾದ) ವ್ಯಾಪಾರಿಯೇ ಇಲ್ಲ. ನಾನು ವ್ಯಾಪಾರಿಯಾದುದರಿಂದ ನನ್ನ ವೃತ್ತಿಧರ್ಮಕ್ಕನುಗುಣವಾಗಿ ಧರ್ಮಬುದ್ಧಿ ಅಧರ್ಮಬುದ್ಧಿಯಾಗಿ ಧನವನ್ನು ವಂಚಿಸಿ ನನ್ನ ಮನೆಗೆ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಸೂರ್ಯನು ಮೂಡಿ ಬೆಳಗಾಯಿತು. ಆದ್ದರಿಂದ ತೆಗೆದುಕೊಂಡು ಹೋಗಲು  ಸಾಧ್ಯವಾಗದೆ ಮರದ ಪೊಟರೆಯಲ್ಲಿಟ್ಟು ಬಂದೆನು. ಮರುದಿವಸ ಹೋಗಿ ನೋಡುವಷ್ಟರಲ್ಲಿ ಆ ಹೊನ್ನನ್ನು ಒಂದು ಸರ್ಪವು ಸುತ್ತಿಕೊಂಡು ಮಲಗಿತ್ತು ಆದ್ದರಿಂದ ಹೊನ್ನನ್ನು ತೆಗೆದುಕೊಂಡು ಹೋಗಲು ಅಂಜಿದೆನು. ನೀವೆಲ್ಲ ಇಲ್ಲಿಯೇ ಇದ್ದು ನೋಡುತ್ತಿರಿ. ಪೊಟರೆಯೊಳಗೆ ಹೊಗೆಯನ್ನು ಹಾಕಿ ಹಾವನ್ನು ಹೊರಹೋಗುವಂತೆ ಮಾಡಿ ಕದ್ದ ಒಡವೆಯನ್ನು ಕೊಡುವೆನು.  ಎಂದು ಧರ್ಮಬುದ್ಧಿಯು ಹುಲ್ಲು ಕಟ್ಟಿಗೆಯನ್ನು ತರಿಸಿ ಅದನ್ನು ಪೊಟರೆಯಲ್ಲಿ ತುಂಬಿ ದುಷ್ಟಬುದ್ಧಿಯ ಮನೆಗೆ ಬೆಂಕಿ ಹಾಕುವಂತೆ ಬೆಂಕಿ ಹಾಕಲು ಹೊಗೆ ಸುತ್ತಿ ಬೆಂಕಿ ಉರಿಯತೊಡಗಲು ಒಳಗಿದ್ದ ಪ್ರೇಮಮತಿ (ದುಷ್ಟಬುದ್ಧಿಯ ತಂದೆ) ಧೈರ್ಯಗೆಟ್ಟು, ಕೂಗುತ್ತ (ಬೊಬ್ಬೆ ಹಾಕುತ್ತ) ಪೊಟರೆಯೊಳಗಿನಿಂದ ಹೊರಳಿ ಉರುಳಿ ಕಂಠಗತಪ್ರಾಣನಾದನು. ಅದನ್ನು ನೋಡಿದ ಧರ್ಮಾಧಿಕರಣರು ಇವನು ದುಷ್ಟಬುದ್ಧಿಯ ತಂದೆಯೆಂಬುದರಲ್ಲಿ ಸಂಶಯವಿಲ್ಲ. ಎಂದು ಅರಿತು ಈ ಪಾಪಕರ್ಮನಾಗಿರುವ ದುಷ್ಟಪುತ್ರನಿಂದ ನಿನಗೆ ಇಂತ ದುರ್ಮರಣ ಸಂಭವಿಸಿತು ಎಂದರು.

I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. “ವೃಕ್ಷಸಾಕ್ಷಿ” ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
ಉ: “ವೃಕ್ಷಸಾಕ್ಷಿ” ಕತೆಯನ್ನು ದುರ್ಗಸಿಂಹ ಕವಿಯು ರಚಿಸಿದ ಕರ್ನಾಟಕ ಪಂಚತಂತ್ರಂ ಎಂಬ ಕೃತಿಯಿಂದ ಆರಿಸಲಾಗಿದೆ.
2. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
ಉ: ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಸಂಪತ್ತಿನ ಕಳ್ಳತನದ ಆರೋಪವನ್ನು ಹೊರಿಸಿದನು.
3. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
ಉ: ಹೊನ್ನನ್ನು ಹೂತಿಟ್ಟ ಸ್ಥಳದಲ್ಲಿ ಮತ್ತು ಆ ಸಂದರ್ಭದಲ್ಲಿ ಧರ್ಮಬುದ್ಧಿ ಮತ್ತು ತನ್ನನ್ನು ಹೊರತುಪಡಿಸಿ ಮನುಷ್ಯರಾರೂ ಇರಲಿಲ್ಲ. ಆದ್ದರಿಂದ ಕದ್ದವರಾರು ಎಂದು ಅಲ್ಲಿದ್ದ ಆಲದ ಮರವೊಂದೇ ಹೇಳಲು ಸಾಧ್ಯ ಎಂದು ದುಷ್ಟಬುದ್ಧಿಯು ಹೇಳಿದಾಗ ಧರ್ಮಾಧಿಕರಣರು ವಿಸ್ಮಯ ಹೊಂದಿದರು.
4. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ಉ: ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ದೇವ, ಗುರು, ಬ್ರಾಹ್ಮಣರ ಪೂಜೆಗಳನ್ನು ಮಾಡುತ್ತ ಕಳೆದನು.
5. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಉ: ಹೊನ್ನನ್ನು ಕದ್ದವರಾರು ಎಂದು ಸಾಕ್ಷ್ಯ ಕೇಳಲು ಧರ್ಮಾಧಿಕರಣರು ವಟ ವೃಕ್ಷದ ಸಮೀಪಕ್ಕೆ ಬಂದರು.

II. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯನ್ನಿತ್ತನು?
ಉ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರಕ್ಕೆ ಹೋಗಿ ಸಾಕಷ್ಟು ಹಣ ಸಂಪತ್ತು ಸಂಪಾದಿಸಿಕೊಂಡು ತಮ್ಮ ಜನ್ಮಭೂಮಿಗೆ ಮರಳಿ ಹೊರ ಉದ್ಯಾನವನದಲ್ಲಿದ್ದ ಸಂದರ್ಭದಲ್ಲಿ ಅದನ್ನು ಇಬ್ಬರೂ ಸಮ ಪಾಲು ಮಾಡಿಕೊಳ್ಳೋಣ ಎಂದು ಧರ್ಮಬುದ್ಧಿಯು ಹೇಳಿದಾಗ ಪಾಪಬುದ್ಧಿಯಿಂದ ಕೂಡಿದವನಾದ ದುಷ್ಟಬುದ್ಧಿಯು ನಾವು ಇಷ್ಟು ಹೊನ್ನನ್ನು ಮನೆಯಲ್ಲಿಟ್ಟು ಸ್ವೇಚ್ಛೆಯಿಂದ ಬಾಳಲು ಸಾಧ್ಯವಿಲ್ಲ ಮತ್ತೆ ವ್ಯಾಪಾರಕ್ಕೆ ಬೇರೆ ಊರಿಗೆ ಹೋಗಬೇಕಾದ್ದರಿಂದ ನಮ್ಮಿಬ್ಬರಿಗೂ ವೆಚ್ಚಮಾಡಲು ಎಷ್ಟು ಬೇಕೋ ಅಷ್ಟು ಹೊನ್ನನ್ನು ತೆಗೆದುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದು ಸಲಹೆ ನೀಡಿದನು.

2. ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?
ಉ: ಹೊನ್ನು ಹೇಗೆ ನಾಪತ್ತೆಯಾಯಿತು ಎಂಬುದನ್ನು ಅಲ್ಲಿದ್ದ ವಟವೃಕ್ಷವೊಂದೇ ಹೇಳಲು ಸಾಧ್ಯ ಎಂದು ಧರ್ಮಾಧಿಕರಣರು ವೃಕ್ಷಸಾಕ್ಷಿಯನ್ನು ಕೇಳುವಂತೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಯಾರೂ ಇಲ್ಲದಂತಹ ಸ್ಥಳಕ್ಕೆ ಕರೆತಂದು ನಡೆದ ವೃತ್ತಾಂತವೆಲ್ಲವನ್ನೂ ವಿವರಿಸಿ ಹೇಳಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣವು ಬರುವುದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹೊನ್ನೆಲ್ಲವನ್ನೂ ತೆಗೆದುಕೊಂಡನೆಂದು ನುಡಿಯಿರಿ ಎಂದನು.

3. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು?
ಉ: ಕಳೆದು ಹೋಗಿರುವ ಸಂಪತ್ತು ಕದ್ದವರಾರು ಎಂದು ತಿಳಿಯಲು ಧರ್ಮಾಧಿಕರಣರು ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯರೊಡಗೂಡಿ ಹೊನ್ನನ್ನು ಹೂತಿಟ್ಟ ಆಲದ ಮರದ ಸಮೀಪಕ್ಕೆ ಬಂದು ಅಷ್ಟವಿಧಾರ್ಚನೆಯಿಂದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ನೀನಾದರೋ ಯಕ್ಷಾದಿ ದಿವ್ಯ ದೇವತಾವಾಸವೂ ಆದ ವೃಕ್ಷವಾಗಿರುವೆ. ಅದರಿಂದ ನಿನ್ನ ಸಾಕ್ಷಿ ಮಾಡಿ ಕೇಳುವೆವು. ನೀನು ನಿಜವನ್ನೇ ನುಡಿಯೆಂದು ಹೇಳಿದರು.

III. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ವೃಕ್ಷಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು? ಏಕೆ? (ವಿದ್ಯಾರ್ಥಿಗಳ ವಿವೇಚನೆಗೆ ಬಿಡಲಾಗಿದೆ.)
2. ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗು ಬಾಣವಾದ ಬಗೆಯನ್ನು ತಿಳಿಸಿ?
ಉ: ಅತಿ ಕುಟಿಲ ಮನಸ್ಸುಳ್ಳವನಾದ ದುಷ್ಟಬುದ್ಧಿಯು ಧರ್ಮಬುದ್ಧಿ ಮತ್ತು ತಾನು ಇಬ್ಬರೂ ಸೇರಿಯೇ ಸಂಪಾದಿಸಿದ ಸಂಪತ್ತನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡದೇ ಅದನ್ನು ಮರದ ಕೆಳಗೆ ಹೂತಿಡಲು ಧರ್ಮಬುದ್ಧಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ. ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಹೂತಿಟ್ಟಿದ್ದ ಹೊನ್ನನ್ನು ತಾನೇ ತೆಗೆದು ಅದರ ಕಳುವಿನ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸುತ್ತಾನೆ. ಕೊನೆಗೆ ಇಬ್ಬರೂ ಧರ್ಮಾಧಿಕರಣರಲ್ಲಿಗೆ ಬಂದು ವ್ಯಾಜ್ಯ ತೀರ್ಮಾನಿಸುವಂತೆ ಕೇಳಿಕೊಳ್ಳುತ್ತಾರೆ. ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೆ ಹೊನ್ನನ್ನು ಕದ್ದಿದ್ದಾನೆಂದು ಹೇಳುವ ದುಷ್ಟಬುದ್ಧಿಯು ಅದಕ್ಕೆ ಅಲ್ಲಿದ್ದ ಮರವೇ ಸಾಕ್ಷಿ ಎನ್ನುವನು. ಮರುದಿನ ಮರದ ಬಳಿ ಸಾಕ್ಷಿ ಕೇಳಲು ಹೋಗುವುದೆಂದು ತೀರ್ಮಾನವಾದಾಗ ಮನೆಗೆ ಬಂದ ದುಷ್ಟಬುದ್ಧಿಯು ತನ್ನ ತಂದೆಯ ಬಳಿ ಮರದ ಪೊಟರೆಯ್ಲಿ ಅವಿತು ಸಾಕ್ಷಿ ನುಡಿಯುವಂತೆ ಒತ್ತಾಯಿಸುತ್ತಾನೆ. ಒಲ್ಲದ ಮನಸ್ಸಿನಿಂದ ಅವನ ತಂದೆಯು ಮಗನ ಮೇಲಿನ ವ್ಯಾಮೋಹಕ್ಕೆ ಕಟ್ಟುಬಿದ್ದು ಮರುದಿನ ಎಲ್ಲರೂ ಬರುವುದಕ್ಕೆ ಮುಂಚೆಯೇ ಮರದ ಪೊಟರೆಯಲ್ಲಿ ಅವಿತು ಕುಳಿತು ಕೊಳ್ಳುವನು. ಧರ್ಮಾಧಿಕರಣರು  ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯರನ್ನು ನಿಲ್ಲಿಸಿ ವೃಕ್ಷದ ಸಾಕ್ಷಿ ಕೇಳಿದಾಗ ಪೊಟರೆಯಲ್ಲಿ ಅವಿತಿದ್ದ ದುಷ್ಟಬುದ್ಧಿಯ ತಂದೆಯು ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದಾಗ ಮರವು ಸಾಕ್ಷಿ ನುಡಿಯುವುದೇ ಆದಲ್ಲಿ ಅದು ಸತ್ಯವನ್ನು ಹೇಳದೇ ಏಕೆ ಸುಳ್ಳು ನುಡಿಯುವುದು ಎಂದು ಆಲೋಚಿಸಿದ ಧರ್ಮಬುದ್ಧಿಯು ಮರವನ್ನು ಪ್ರದಕ್ಷಿಣೆ ಹಾಕಿದಾಗ ಅಲ್ಲಿ ಮನುಷ್ಯ ಸಂಚಾರದ ಕುರುಹು ದೊರೆಯುತ್ತದೆ. ಆಗ ಧರ್ಮಬುದ್ಧಿಯು ಉಪಾಯವಾಗಿ ಎಲ್ಲ ವ್ಯಾಪಾರಿಗಳಿಗಿರುವಂತೆ ತನಗೂ ಕೂಡ ಹಣದ ಮೋಹವಿದ್ದುದಾಗಿ ಹೂತಿಟ್ಟ ಹಣವನ್ನು ತೆಗೆಯಲು ಬಂದು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಬೆಳಗಾಗಿದ್ದರಿಂದ ಪೊಟರೆಯಲ್ಲಿ ಅಡಗಿಸಿಟ್ಟುದಾಗಿಯೂ ಮರುದಿನ ತೆಗೆದುಕೊಂಡು ಹೋಗಲು ಬಂದಾಗ ಅಲ್ಲಿ ದೊಡ್ಡದಾದ ಹಾವು ಇತ್ತೆಂದೂ ಅದನ್ನು ಹಾಗೆ ಅಲ್ಲಿಯೇ ಬಿಟ್ಟು ಹೋಗಿದ್ದುದಾಗಿ ತಿಳಿಸಿ ಕಟ್ಟಿಗೆಯನ್ನು ತರಿಸಿ ಪೊಟರಿಗೆ ಹೊಗೆ ಹಾಕಿಸಿ ಹಾವನ್ನು ಓಡಿಸಿ ಅಡಗಿಸಿಟ್ಟ ಹೊನ್ನನ್ನು ಮರಳಿಸುವಂತೆ ಮಾಡಿದಾಗ ಪೊಟರೆಯಲ್ಲಿ ಅಡಗಿ ಕುಳಿತ್ತಿದ್ದ ದುಷ್ಟಬುದ್ಧಿಯ ತಂದೆ ಬೆಂಕಿಗೆ ಆಹುತಿಯಾಗುತ್ತಾನೆ. ಹೀಗೆ ಅತಿ ಆಸೆಗೆ ಒಳಗಾದ ದುಷ್ಟಬುದ್ಧಿಯು ತಾನು ಬೀಸಿದ ಬಲೆಯಲ್ಲಿ ತಾನೇ ಸಿಕ್ಕು ಹೊನ್ನಿನ ಜೊತೆ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ.

IV. ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ:
1. “ಪೊನ್ನನೆಲ್ಲಮಂ ನೀನೆ ಕೊಂಡೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ “ವೃಕ್ಷಸಾಕ್ಷಿ” ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.
ಸಂದರ್ಭ: ವ್ಯಾಪಾರದಿಂದ ಬಂದ ಸಂಪತ್ತನ್ನು ಹಂಚಿಕೊಳ್ಳೋಣ ಎಂಬ ಧರ್ಮಬುದ್ಧಿಯ ಸಲಹೆಗೆ ದುಷ್ಟಬುದ್ಧಿಯು ಇಷ್ಟೊಂದು ಹಣವನ್ನು ತೆಗೆದುಕೊಂಡು ಮನೆಯಲ್ಲಿಟ್ಟರೆ ನಮಗೆ ತೊಂದರೆಯಾಗುವುದು. ಆದ್ದರಿಂದ ಖರ್ಚಿಗೆ (ವೆಚ್ಚಕ್ಕೆ) ಬೇಕಾಗುವಷ್ಟು ಮಾತ್ರ ನಮ್ಮ ಬಳಿ ಇಟ್ಟುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದನು. ಅದಕ್ಕೆ ಧರ್ಮಬುದ್ಧಿಯೂ ಒಪ್ಪಿಕೊಳ್ಳಲು ಇಬ್ಬರೂ ಸೇರಿ ಅದನ್ನು ಅಲ್ಲಿಯೇ ಇದ್ದ ಆಲದ ಮರದಕೆಳಗೆ ಹೂತಿಟ್ಟರು. ಕೆಲವು ದಿನಗಳು ಕಳೆದ ಮೇಲೆ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಸಂಪತ್ತನ್ನು ಬಚ್ಚಟ್ಟ ಸ್ಥಳಕ್ಕೆ ಹೋಗಿ ಸಂಪತ್ತೆಲ್ಲವನ್ನೂ ತೆಗೆದುಕೊಂಡು ಗುಂಡಿಯನ್ನು ಮೊದಲಿನಂತೆಯೇ ಮುಚ್ಚಿಟ್ಟನು. ಮತ್ತೆ ಕೆಲವು ದಿನಗಳು ಕಳೆದ ಮೇಲೆ ತಾನೇ ಧರ್ಮಬುದ್ಧಿಯನ್ನು ಕರೆದು ತನಗೆ ವ್ಯಯಕ್ಕಾಗಿ ಹಣವು ಬೇಕಿತ್ತೆಂದು ಸಂಪತ್ತನ್ನು ಹೂತಿಟ್ಟಕಡೆ ಹೋಗಿ ತರೋಣವೆಂದು ಅವನನ್ನು ಕರೆದುಕೊಂಡು ಹೋಗಿ ಅಲ್ಲಿ ಅದು ಇರದಿದ್ದರಿಂದ ನೀನೆ ಎಲ್ಲವನ್ನು ತೆಗೆದುಕೊಂಡೆ ಎಂದು ಮತ್ತೆ ಧರ್ಮಬುದ್ಧಿಯ ಮೇಲೆ ಆರೋಪವನ್ನು ಮಾಡುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಹಣವನ್ನು ತಾನೇ ದೋಚಿ ಅದನ್ನು ಮರೆಮಾಚುವ ಉದ್ದೇಶದಿಂದ ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿರುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

2. “ಈತನ ಮಾತು ಅಶ್ರುತಪೂರ್ವಮ್”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ “ವೃಕ್ಷಸಾಕ್ಷಿ” ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಾಧಿಕರಣರು ಹೇಳಿದರು.
ಸಂದರ್ಭ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರದಿಂದ ತಾವು ಸಂಪಾದಿಸಿದ ಹಣವನ್ನು ದುಷ್ಟಬುದ್ಧಿಯ ಸಲಹೆಯಂತೆ ಖರ್ಚಿಗೆ ಬೇಕಾದಷ್ಟು ಹಣವನ್ನು ಮಾತ್ರ ತಮ್ಮ ಬಳಿ ಇರಿಸಿಕೊಂಡು ಉಳಿದದ್ದನ್ನು ಒಂದು ಆಲದ ವೃಕ್ಷದ ಬಳಿ ಹೂತಿಟ್ಟರು. ಪಾಪಬುದ್ಧಿಯಿಂದ ಕೂಡಿದ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಆ ಸಂಪತ್ತನ್ನು ತೆಗೆದುಕೊಂಡು ಕಳ್ಳತನದ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸಿದನು. ಸಂಪತ್ತನ್ನು ತೆಗೆದುಕೊಂಡವರಾರೆಂದು ತಮ್ಮ ವ್ಯಾಜ್ಯವನ್ನು ಬಗೆಹರಿಸಲು ಅವರು ಧರ್ಮಾಧಿಕರಣರು ಇರುವಲ್ಲಿಗೆ ಬಂದರು. ನಡೆದುದೆಲ್ಲವನ್ನು ಧರ್ಮಾಧಿಕರಣರಿಗೆ ವಿವರಿಸಿದ ದುಷ್ಟಬುದ್ಧಿಯು ಹೊನ್ನೆಲ್ಲವನ್ನು ಧರ್ಮಬುದ್ಧಿಯೇ ತೆಗೆದುಕೊಂಡನೆಂಬುದಕ್ಕೆ ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದಾಗ ಧರ್ಮಾಧಿಕರಣರು ತಮ್ಮ ಮನಸ್ಸಿನಲ್ಲಿ ಮೇಲಿನಂತೆ ಅಂದುಕೊಂಡರು.
ಸ್ವಾರಸ್ಯ: ಮನುಷ್ಯರು ಸಾಕ್ಷಿ ನುಡಿಯುವುದು ಸಹಜ. ಆದರೆ ವೃಕ್ಷವು ಸಾಕ್ಷಿ ಹೇಳುವುದು ಆಶ್ಚರ್ಯವೇ ಸರಿ ಎಂದು ಧರ್ಮಾಧಿಕರಣರು ಆಶ್ಚರ್ಯ ಪಡುವ ಸನ್ನಿವೇಶ ಇಲ್ಲಿ ವ್ಯಕ್ತವಾಗಿದೆ.

3. “ನಿನ್ನ ಪಳುವಗೆ ನಮ್ಮ ಕುಲವನೆಲ್ಲಮನಳಿವ ಬಗೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ “ವೃಕ್ಷಸಾಕ್ಷಿ” ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ)ಯು ದುಷ್ಟಬುದ್ಧಿಗೆ ಹೇಳಿದನು.
ಸಂದರ್ಭ: ಹೊನ್ನನ್ನು ತಾನು ಕದ್ದ ದುಷ್ಟಬುದ್ಧಿಯು ಅದರ ಆರೋಪವನ್ನು ಹೊರಿಸಿ ಅದಕ್ಕೆ ವೃಕ್ಷವೇ ಸಾಕ್ಷಿಯೆಂದು ಧರ್ಮಾಧಿಕರಿಣರಿಗೆ ಹೇಳಿದನು. ಆ ಹೊತ್ತಿಗೆ ಸಂಜೆಯಾದ್ದರಿಂದ ಮರುದಿನ ವೃಕ್ಷನ್ಯಾಯ ಕೇಳುವುದೆಂದು ತೀರ್ಮಾನವಾಯಿತು. ಮನೆಗೆ ಮರಳಿದ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿ ಧರ್ಮಾಧಿಕರಣರು ಆರೋಪದ ಕುರಿತು ಕೇಳಿದಾಗ ಧರ್ಮಬುದ್ಧಿಯೇ ಹೊನ್ನನ್ನು ಕದ್ದವನೆಂದು ಹೇಳುವಂತೆ ಒತ್ತಾಯಿಸಿದನು. ಆಗ ಮಗನಿಗೆ ಬುದ್ಧಿ ಹೇಳುತ್ತ ಪ್ರೇಮಮತಿ (ತಂದೆ)ಯು ಪರಧನ, ವಿಶ್ವಾಸಘಾತಕತನ, ಸ್ವಾಮಿದ್ರೋಹ ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಹಾನಿಯನ್ನುಂಟು ಮಾಡುವಂತವು. ನಿನ್ನ ದುರಾಸೆಯಿಂದಾದ ಕಳ್ಳತನವು ನಮ್ಮ ಕುಲವನ್ನೇ ನಾಶ ಮಾಡುವುದು ಎಂದು ಹೇಳಿದನು.
ಸ್ವಾರಸ್ಯ: ಅನೀತಿ, ಅನ್ಯಾಯ, ಅಕ್ರಮಗಳಿಂದ ಸಂಪಾದಿಸುವುದು ಎಂದಿಗೂ ಒಳ್ಳೆಯದನ್ನು ಮಾಡಲಾರದು ಎಂದು ಮೇಲಿನ ವಾಕ್ಯವು ಸೂಚಿಸುವುದು. ಪ್ರೇಮಮತಿಯು ತನ್ನ ಮಗನಾದ ದುಷ್ಟಬುದ್ಧಿಗೆ ಬುದ್ಧಿಹೇಳಲು ಪ್ರಯತ್ನಿಸುವುದೂ ಸಹ ಇಲ್ಲಿ ವ್ಯಕ್ತವಾಗಿದೆ.

4. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗಂ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ “ವೃಕ್ಷಸಾಕ್ಷಿ” ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ)ಯು ಮರದ ಪೊಟರೆಯಲ್ಲಿ ಅಡಗಿದ್ದು ಹೇಳಿದನು.
ಸಂದರ್ಭ: ವ್ಯಾಪಾರದಲ್ಲಿ ದೊರೆತು ಹೂತಿಟ್ಟ ಹಣದ ಕಳುವಿನ ಆರೋಪವನ್ನು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊರಿಸುತ್ತಾನೆ. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣರ ಬಳಿ ಬಂದು ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೇ ಹೊನ್ನನ್ನು ತೆಗೆದವನು ಎಂಬುದಕ್ಕೆ ಆಲದ ಮರವೇ ಸಾಕ್ಷಿ ಎನ್ನುತ್ತಾನೆ. ಮರುದಿನ ಅವರೆಲ್ಲರೂ ಹೊನ್ನನ್ನು ಅಡಗಿಸಿಟ್ಟಿದ್ದ ಆಲದ ಮರದ ಬಳಿ ಬರುತ್ತಾರೆ. ಮಗನ ಒತ್ತಾಯಕ್ಕೆ ಕಟ್ಟುಬಿದ್ದ ದುಷ್ಟಬುದ್ಧಿಯ ತಂದೆ ಈ ಮೊದಲೇ ಮರದ ಪೊಟರೆಯಲ್ಲಿ ಅಡಗಿ ಕುಳಿತಿರುತ್ತಾನೆ. ಧರ್ಮಾಧಿಕರಣರು ವೃಕ್ಷದ ಬಳಿ ವಿಚಾರಿಸಿದಾಗ ಅಲ್ಲಿ ಅಡಗಿ ಕುಳಿತಿದ್ದ ಪ್ರೇಮಮತಿ (ದುಷ್ಟಬುದ್ಧಿಯ ತಂದೆ)ಯು ಮತಿಗೆಟ್ಟು ಧರ್ಮದ ದಾರಿಯನ್ನು ಬಿಟ್ಟು “ಪ್ರಕೃತಿ ವಿಕೃತಿಯಾದರೆ ಮನುಷ್ಯನ ಆಯುಷ್ಯವು ಕುಂದುವುದು ಎಂದು ನುಡಿವಂತೆ ಧರ್ಮಬುದ್ಧಿ ಎಲ್ಲ ಸಂಪತ್ತನ್ನು ತೆಗೆದುಕೊಂಡನೆಂದು ಹೇಳುತ್ತಾನೆ.
ಸ್ವಾರಸ್ಯ: ಪ್ರಕೃತಿ ಮುನಿದರೆ ಯಾರಿಗೂ ಉಳಿಗಾಲವಿಲ್ಲ. ವಟವೃಕ್ಷವು ಪ್ರಕೃತಿಯ ಕೊಡುಗೆ. ಅದಕ್ಕೆ ವಿರುದ್ಧವಾಗಿ ನಡೆಯುವುದು ವಿಕೃತಿ,  ಸಹಜವಾದ ಒಳ್ಳೆಯ ನಡತೆ ಬಿಟ್ಟು ಅಸಹಜವಾದ ದುಷ್ಟ ನಡತೆಯೆಡೆಗೆ ಮನುಷ್ಯ ಸಾಗಿದರೆ ಆತನ ಆಯಸ್ಸು ಕ್ಷೀಣಿಸುತ್ತದೆ ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

5. “ಹುಸಿಯದ ಬೇಹಾರಿಯೇ ಇಲ್ಲ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ “ವೃಕ್ಷಸಾಕ್ಷಿ” ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು.
ಸಂದರ್ಭ: ನ್ಯಾಯವನ್ನು ತೀರ್ಮಾನಿಸಲು ವೃಕ್ಷದ ಸಾಕ್ಷಿ ಕೇಳಲು ತೀರ್ಮಾನಿಸಿದಾಗ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿಸಿಟ್ಟು ಧರ್ಮಾಧಿಕರಣರು ಪ್ರಶ್ನಿಸಿದಾಗ ಧರ್ಮಬುದ್ಧಿಯೇ ಕದ್ದನೆಂದು ತಂದೆಯಿಂದ ಹೇಳಿಸುವನು. ವೃಕ್ಷವು ಸಾಕ್ಷ್ಯವನ್ನು ನುಡಿಯುವುದೇ ಆದಲ್ಲಿ ಸತ್ಯವನ್ನೇಕೆ ನುಡಿಯಲಾರದು ಎಂದು ಅನುಮಾನಗೊಂಡ ಧರ್ಮಬುದ್ಧಿಯು ಮರವನ್ನೊಮ್ಮೆ ಸುತ್ತು ಹಾಕಿದಾಗ ಪೊಟರೆಯ ಬಳಿ ಮನುಷ್ಯರ ಕುರುಹನ್ನು ಅರಿತು ಇದರ ಮರ್ಮವನ್ನು ತಿಳಿಯಬೇಕೆಂದು ಮೇಲಿನಂತೆ ಹೇಳುವನು. ವ್ಯಾಪಾರಿ ಬುದ್ಧಿಯಿಂದ ಹೀಗೆ ಮಾಡಿದ್ದಾಗಿಯೂ, ಪೊಟರೆಯಲ್ಲಿ ಅಡಗಿಸಿಟ್ಟ ಸಂಪತ್ತನ್ನು ಪಡೆಯಲು ಬಂದಾಗ ಅದನ್ನು ಹಾವು ಬಳಸಿ ಮಲಗಿತ್ತೆಂದೂ, ಈಗ ಹೊಗೆ ಹಾಕಿಸಿ ಹಾವನ್ನು ಓಡಿಸುವೆನು ಮತ್ತು ಅಡಗಿಸಿಟ್ಟ ಹೊನ್ನನ್ನು ಮರಳಿ ಪಡೆಯಬಹುದು ಎಂದು ಪೊಟರೆಗೆ ಬೆಂಕಿ ಹಾಕಿಸಿ ಅಡಗಿ ಕುಳಿತ ದುಷ್ಟಬುದ್ಧಿಯ ತಂದೆ ಹೊರಗೆ ಬರುವಂತೆ ಮಾಡಿ ನಿಜ ಸಂಗತಿಯನ್ನು  ಬಯಲು ಮಾಡುವನು.
ಸ್ವಾರಸ್ಯ: ವ್ಯಾಪಾರ ವೃತ್ತಿಯಲ್ಲಿ ಕೆಲವೊಮ್ಮೆ ಲಾಭಕ್ಕಾಗಿ ಸುಳ್ಳನ್ನು ಹೇಳುವುದು ಅನಿವಾರ್ಯ. ಅದರಂತೆ ತಾನೂ ಧರ್ಮಬುದ್ಧಿ ವ್ಯಾಪಾರಿಯಾಗಿದ್ದರಿಂದ ಅಧರ್ಮಬುದ್ಧಿಯಾದೆನೆಂದು ಹೇಳುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

V. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1. ವಡ್ಡಾರಾಧನೆ : ಶಿವಕೋಟ್ಯಾಚಾರ್ಯ : : ಪಂಚತಂತ್ರಂ : _________(ದುರ್ಗಸಿಂಹ)
2. ಕಬ್ಬ : ಕಾವ್ಯ : : ಬೇಹಾರಿ : _________(ವ್ಯಾಪಾರಿ)
3. ಅನೃತ : ಸುಳ್ಳು : : ಕೃತ್ರಿಮ : _________(ಮೋಸ)
4. ಬಂದಲ್ಲದೆ : ಲೋಪ : : ಧೃತಿಗೆಟ್ಟು : ____________(ಆದೇಶ)
5. ದೈವಭಕ್ತಿ : ತತ್ಪುರುಷ : : ಅಬ್ಜೋದರ : __________(ಬಹುವ್ರೀಹಿ ಸಮಾಸ)

ಭಾಷಾ ಚಟುವಟಿಕೆ: 
1. ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ?
ಪೋಗಲ್ ವೇಳ್ಕುಂ, ತಕ್ಕನಿತು, ಪೂಳ್ದೆಡೆ.
ಉ: ಪೋಗಲ್ + ಬೇಳ್ಕುಂ = ಪೋಗಲ್ ವೇಳ್ಕುಂ =ಆದೇಶ ಸಂಧಿ
ತಕ್ಕ + ಅನಿತು =ತಕ್ಕನಿತು = ಲೋಪಸಂಧಿ
ಪೂಳ್ದ + ಎಡೆ = ಪೂಳ್ದೆಡೆ = ಲೋಪಸಂಧಿ.
2. ಈ ಕೆಳಗೆ ನೀಡಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ?
ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ, ಧನಹರಣ, ಸಾಕ್ಷಿಮಾಡಿ, ಬಲವಂದು.
ಉ: ಅತಿಯಾದ + ಕುಟಿಲ =ಕರ್ಮದಾರಯ ಸಮಾಸ
ಕೈಯಂ + ಕೊಳ್ವುದು = ಕ್ರಿಯಾ ಸಮಾಸ
ಕಡಿದು + ಏಕಾಂತ = ಕರ್ಮಧಾರಯ ಸಮಾಸ
ಸ್ವಾಮಿಗೆ + ದ್ರೋಹ = ತತ್ಪುರುಷ ಸಮಾಸ
ಪರರ + ಧನ = ತತ್ಪುರುಷ ಸಮಾಸ
ಧನದ + ಹರಣ = ತತ್ಪುರುಷ ಸಮಾಸ
ಸಾಕ್ಷಿಯನ್ನು + ಮಾಡಿ = ಕ್ರಿಯಾ ಸಮಾಸ
ಬಲದಿಂದ + ಬಂದು = ಕ್ರಿಯಾ ಸಮಾಸ

3. ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ?
1. ಅತಿಕುಟಿ | ಲ ಮನಂ | ಧನಲು
ಬ್ಧತೆ ಯಿಂ | ದಂ ದು | ಷ್ಟಬುದ್ಧಿ | ನುಡಿದಂ | ಪುಸಿಯಂ
ಕಂದಪದ್ಯ-ಲಕ್ಷಣ
ಇದು ನಾಲ್ಕು ಚರಣಗಳುಳ್ಳ ಮಾತ್ರಾವೃತ್ತ ಪದ್ಯ. ಒಂದನೆಯ ಮತ್ತು ಮೂರನೆಯ ಚರಣಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಮೂರು ಗಣಗಳೂ, ಎರಡನೆಯ ಮತ್ತು ನಾಲ್ಕನೆಯ ಚರಣಗಳಲ್ಲಿ ನಾಲ್ಕು ಮಾತ್ರೆಗಳ ಐದೈದು ಗಣಗಳೂ ಇರುತ್ತದೆ.
2. ಮೇದಿನಿ | ಯಂ ಕ್ರಮ | ಕ್ರಮದೆ | ಪರ್ವಿದು | ದಾತ್ತನ | ಭೋ ವಿಭಾ | ಗಮಾ……
ಉತ್ಪಲ ಮಾಲಾ ವೃತ್ತ –ಲಕ್ಷಣ
ಇದು ನಾಲ್ಕು ಪಾದಗಳ ಸಮವೃತ್ತ ಪದ್ಯ. ಪ್ರತಿ ಚರಣದಲ್ಲಿ 20 ಅಕ್ಷರಗಳಿರುತ್ತವೆ. ಮತ್ತು ಭ,ರ,ನ,ಭ,ರ, ಎಂಬ ಆರು ಗಣಗಳೂ ಮೇಲೆ ಒಂದು ಲಘು, ಒಂದು ಗುರು ಬರುತ್ತದೆ. ಅಲ್ಲದೆ ಒಂಬತ್ತನೆಯ ಅಕ್ಷರ ಸ್ಥಾನದಲ್ಲಿ ಯತಿಯು ಬರುವುದು. ಹಾಗೂ ಈ ವೃತ್ತದ ಪ್ರತಿಯೊಂದು ಚರಣದ ಆದಿಯಲ್ಲಿ ಒಂದು ಗುರು ಬರುತ್ತದೆ.
******



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon